ADVERTISEMENT

ವಿಧಾನಸೌಧ ಆವರಣದಲ್ಲಿ 26ಕ್ಕೆ ಕೆಂಪೇಗೌಡ, ಬಸವಣ್ಣ ಪ್ರತಿಮೆ ಅನಾವರಣ: ಆರ್‌. ಅಶೋಕ

ಬೆಂಗಳೂರು ಹಬ್ಬದ ಅಂಗವಾಗಿ ವಿಶೇಷ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 20:32 IST
Last Updated 20 ಮಾರ್ಚ್ 2023, 20:32 IST
   

ಬೆಂಗಳೂರು: ಮಾರ್ಚ್‌ 25ರಿಂದ ಎರಡು ದಿನಗಳ ಕಾಲ ಬೆಂಗಳೂರು ಹಬ್ಬ ಆಯೋಜಿಸಲಾಗಿದೆ. ವಿಧಾನಸೌಧದ ಆವರಣದಲ್ಲಿ ಸ್ಥಾಪಿಸಿರುವ ನಾಡಪ್ರಭು ಕೆಂಪೇಗೌಡ ಮತ್ತು ಬಸವಣ್ಣ ಪ್ರತಿಮೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾರ್ಚ್‌ 26ರಂದು ಅನಾವರಣಗೊಳಿಸುವರು ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ವಿಧಾನಸೌಧದಲ್ಲಿ ಸೋಮವಾರ ‘ಬೆಂಗಳೂರು ಹಬ್ಬ’ದ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ಶನಿವಾರ ಸಂಜೆ ಬೆಂಗಳೂರು ಹಬ್ಬದ ಉದ್ಘಾಟನಾ ಸಮಾರಂಭ ನಡೆಯಲಿದೆ. ನಂತರ ಗಾಯಕರಾದ ಅನನ್ಯಾ ಭಟ್‌, ನವೀನ್‌ ಸಜ್ಜು, ಜನಾರ್ದನ್‌ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ’ ಎಂದರು.

ಎರಡು ದಿನಗಳ ಕಾಲ ಕಬ್ಬನ್‌ ಉದ್ಯಾನದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು. ಕರ್ನಾಟಕ ಚಿತ್ರಕಲಾ ಪರಿಷತ್‌ ಮತ್ತು ಕರ್ನಾಟಕ ಲಲಿತ ಕಲಾ ಅಕಾಡೆಮಿ ಸಹಯೋಗದಲ್ಲಿ ಚಿತ್ರಸಂತೆ ಮಾದರಿಯಲ್ಲಿ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ. ಕರಕುಶಲ ಮೇಳವನ್ನೂ ಆಯೋಜಿಸಲಾಗುವುದು ಎಂದು ತಿಳಿಸಿದರು.

ADVERTISEMENT

ವಿವಿಧ ಅಕಾಡೆಮಿಗಳು, ರಂಗ ಶಂಕರ ಮತ್ತು ನೀನಾಸಂ ಸಂಸ್ಥೆಗಳ ಸಹಯೋಗದಲ್ಲಿ ಬಾಲಭವನದ ಆವರಣದಲ್ಲಿ ನಾಟಕ, ಬೀದಿ ನಾಟಕ, ಗೊಂಬೆಯಾಟ, ಯಕ್ಷಗಾನ, ಗಾಯನ ಮತ್ತು ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. ಕಬ್ಬನ್‌ ಉದ್ಯಾನದ ಬ್ಯಾಂಡ್‌ ಸ್ಟ್ಯಾಂಡ್‌ನಲ್ಲಿ ಪೊಲೀಸ್‌ ಬ್ಯಾಂಡ್‌ ವಾದನ, ನೃತ್ಯ, ಜನಪದ ಗಾಯನ, ನಾಟಕ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಮಕ್ಕಳ ಚಿತ್ರೋತ್ಸವ: ಬಾಲಭವನದ ಸಭಾಂಗಣದಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ ಮಕ್ಕಳ ಚಿತ್ರೋತ್ಸವ ನಡೆಯಲಿದೆ. ಪ್ರತಿದಿನ ಮೂರು ಪ್ರದರ್ಶನಗಳು ನಡೆಯಲಿವೆ. ಶನಿವಾರ ಮತ್ತು ಭಾನುವಾರ ನಗರ ಆಯ್ದ ಚಿತ್ರಮಂದಿರಗಳಲ್ಲಿ ಬೆಳಗಿನ ಪ್ರದರ್ಶನಗಳಲ್ಲಿ ಹಳೆಯ ಕನ್ನಡ ಸಿನಿಮಾಗಳನ್ನು ಉಚಿತವಾಗಿ ಪ್ರದರ್ಶಿಸಲಾಗುವುದು ಎಂದು ಅಶೋಕ ತಿಳಿಸಿದರು.

ಬೆಂಗಳೂರು ಹಬ್ಬದ ಅಂಗವಾಗಿ ಕಬ್ಬನ್‌ ಉದ್ಯಾನದಲ್ಲಿ ಪುಸ್ತಕ ಮೇಳ ಮತ್ತು ಆಹಾರ ಮೇಳವನ್ನೂ ಆಯೋಜಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.