ADVERTISEMENT

ಕೆಂಪೇಗೌಡ ಬಡಾವಣೆ ಮೂಲಸೌಕರ್ಯ: ಶೀಘ್ರ ಕಾಮಗಾರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 16:14 IST
Last Updated 7 ಡಿಸೆಂಬರ್ 2022, 16:14 IST

ಬೆಂಗಳೂರು:ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲಸೌಕರ್ಯಗಳ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಬಿಡಿಎ ಆಯುಕ್ತ ಜಿ. ಕುಮಾರ ನಾಯಕ್ ಅವರು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ಹಿರಿಯ ಅಧಿಕಾರಿಗೊಂದಿಗೆ ಬುಧವಾರ ತುರ್ತು ಸಭೆ ನಡೆಸಿದ ಆಯುಕ್ತರು, ಕಾಮಗಾರಿಗಳ ಅನುಷ್ಠಾನ ವಿಳಂಬಕ್ಕೆ ಕಾರಣ ಮತ್ತು ಅವುಗಳಿಗೆ ಪರಿಹಾರದ ಬಗ್ಗೆ ಚರ್ಚಿಸಿದರು.

ಮುಖ್ಯ ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ ಬಾಕಿ ಇರುವ 59 ಎಕರೆ ಪ್ರದೇಶವನ್ನು ಹಸ್ತಾಂತರಿಸಬೇಕು. ಬಡಾವಣೆಯ ಭೂ ಸ್ವಾಧೀನದ ಅಧಿಸೂಚನೆಯ ವಿರುದ್ಧ ಹೈಕೋರ್ಟ್‌ ಆದೇಶಕ್ಕೆ ಮೇಲ್ಮನವಿ ಸಲ್ಲಿಬೇಕು ಎಂದು ಕಾನೂನು ವಿಭಾಗಕ್ಕೆ ಸೂಚಿಸಿದರು.

ADVERTISEMENT

ಬಡಾವಣೆಯಲ್ಲಿ ಸುಮಾರು 193 ಎಕರೆಯ ಸರ್ಕಾರಿ ಜಮೀನು ಇನ್ನೂ ಕಂದಾಯ ಇಲಾಖೆಯ ಸುಪರ್ದಿಯಲ್ಲಿದೆ. 150 ಎಕರೆ ಸರ್ಕಾರಿ ಜಮೀನನ್ನು ವಿವಿಧ ಹಿಡುವಳಿದಾರರಿಗೆ ಮಂಜೂರು ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಕೆಂಪೇಗೌಡ ಬಡಾವಣೆಯಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಹಾಗೂ ವಿದ್ಯುದೀಕರಣಕ್ಕಾಗಿ ಪ್ರಸ್ತಾವ ಸಲ್ಲಿಸಬೇಕು. ಮೂಲ ಸೌಕರ್ಯ ಕಲ್ಪಿಸುವಲ್ಲಿ ಪ್ರಾಧಿಕಾರದ ಮಂಡಳಿ ಸಭೆಯಿಂದ ಅನುಮೋದನೆಗೊಂಡಿರುವ ವಿವಿಧ ಪ್ರಸ್ತಾವನೆಗಳಿಗೆ ಟೆಂಡರ್ ಕರೆದು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸೂಚಿಸಿದರು.

ಎಂಜಿನಿಯರ್‌ ಸದಸ್ಯ ಶಾಂತರಾಜಣ್ಣ, ಆರ್ಥಿಕ ಸದಸ್ಯರಾದ ಡಾ. ಲೋಕೇಶ್, ಕಾರ್ಯದರ್ಶಿ ಶಾಂತರಾಜ ಹಾಗೂ ಭೂ ಸ್ವಾಧೀನದ ಉಪ ಆಯುಕ್ತರ ಸೌಜನ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.