
ಕೆಂಗೇರಿ: ಇಡ್ಲಿ ಹಬ್ಬವೆಂದೇ ಪ್ರಸಿದ್ಧವಾಗಿರುವ ಬಂಡೆಮಠ ಆರಿದ್ರೋತ್ಸವ ವಿಜೃಂಭಣೆಯಿಂದ ನಡೆಯಿತು.
ದೇವಾಲಯವನ್ನು ವಿವಿಧ ಹೂಗಳಿಂದ ಸಿಂಗರಿಸಲಾಗಿತ್ತು. ಬೆಳಿಗ್ಗೆ ಮೂಲ ದೇವರು ಬಂಡೇಶ್ವರ ಸ್ವಾಮಿಯನ್ನು ಅಲಂಕಾರಗೊಳಿಸಿ ಅಭಿಷೇಕ, ರುದ್ರಾಭಿಷೇಕ, ಅಷ್ಟೋತ್ತರ, ಮಹಾ ಮಂಗಳಾರತಿ ನೆರವೇರಿಸಲಾಯಿತು. ಭಕ್ತರಿಗೆ ಪ್ರಸಾದವಾಗಿ ಇಡ್ಲಿ, ಚಟ್ನಿ ನೀಡಲಾಯಿತು.
ಪೂಜೆಯ ನಂತರ ಕೆಂಗೇರಿಯ ಕೋಟೆ ಸೋಮೇಶ್ವರ ದೇವಾಲಯಕ್ಕೆ ಬಂದ ಬಂಡೇಶ್ವರ ಉತ್ಸವ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಾಲಯದಿಂದ ಹೊರಟ ಉತ್ಸವ ಮೂರ್ತಿ, ರಾತ್ರಿಯವರೆಗೆ ಕೆಂಗೇರಿಯ ವಿವಿಧ ಕೇರಿಗಳಲ್ಲಿ ಸಂಚರಿಸಿತು. ರಾತ್ರಿ ಗ್ರಾಮದ ಯಜಮಾನರ ಮನೆಯಲ್ಲಿ ಉತ್ಸವ ಮೂರ್ತಿ ನೆಲೆಗೊಂಡು ಭಾನುವಾರ ಮುಂಜಾನೆ ಸ್ವಸ್ಥಾನ ಬಂಡೆಮಠ ದೇವಾಲಯಕ್ಕೆ ಮರಳಲಿದೆ ಎಂದು ಬಂಡೆಮಠದ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ಟಿ.ಎನ್. ಜವರಾಯಿಗೌಡ, ಮುಖಂಡರಾದ ಎಂ. ರುದ್ರೇಶ್, ಮಾರೇಗೌಡ, ಶಶಿಕುಮಾರ್, ಕೇಶವ ಮೂರ್ತಿ, ಸುಧೀರ್ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.