ADVERTISEMENT

ಆರು ದಿನ ಕಳೆದರೂ ಪತ್ತೆಯಾಗದ ಚಿರತೆ, ತೀರದ ಆತಂಕ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 21:41 IST
Last Updated 5 ಡಿಸೆಂಬರ್ 2022, 21:41 IST
   

ಕೆಂಗೇರಿ: ಆತಂಕ ಹುಟ್ಟಿಸಿ ಕಣ್ಮರೆಯಾಗಿರುವ ಚಿರತೆ ಆರು ದಿನ ಕಳೆದರೂ ಪತ್ತೆಯಾಗಿಲ್ಲ. ತುರುಹಳ್ಳಿ ಅರಣ್ಯ ವಲಯದ ಜನರ ಆತಂಕ ಹೆಚ್ಚಿಸಿದೆ.

ತುರಹಳ್ಳಿ ಅರಣ್ಯ ವಲಯಾಧಿಕಾರಿ ಗೋವಿಂದರಾಜು ಒಟ್ಟು 22 ಸಿಬ್ಬಂದಿಯ ಎರಡು ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದರೂ ಚಿರತೆ ಸೆರೆ ಸಾಧ್ಯವಾಗಿಲ್ಲ.

ಕೋಡಿಪಾಳ್ಯ, ಹೆಮ್ಮಿಗೆಪುರ, ಗಾಣಕಲ್ ಹಾಗೂ ಬನಶಂಕರಿ 6ನೇ ಹಂತ ಸೇರಿದಂತೆ ತುರಹಳ್ಳಿ ಅರಣ್ಯ ವಲಯದ ಜನರು ರಾತ್ರಿ ವೇಳೆ ಎಂದಿನಂತೆ ಸುತ್ತಾಡಲು ಹಿಂದೇಟು ಹಾಕುತ್ತಿದ್ದಾರೆ.

ADVERTISEMENT

ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರವೂ ಚಿರತೆ ಸೆರೆಗಾಗಿ ಶೋಧನೆ ನಡೆಸಿದರು. ಚಿರತೆ ಸೆರೆ ಹಿಡಿಯುವವರೆಗೆ ಜಾಗೃತವಾಗಿ ಇರುವಂತೆ ಸೂಚನೆ ನೀಡಲಾಗಿದೆ.

ಚಿರತೆ ಭಯಕ್ಕೆ ಗಾಬರಿಗೊಂಡಿರುವ ಗ್ರಾಮಸ್ಥರು ಒಬ್ಬೊಬ್ಬರೇ ತಿರುಗಾಡಲು ಹಿಂದಡಿ ಇಡುತ್ತಿದ್ದಾರೆ. ಶಾಲಾ ಮಕ್ಕಳು ಬೇರೆ ರಸ್ತೆಗಳನ್ನು ನೆಚ್ಚಿಕೊಂಡಿದ್ದಾರೆ. ಚಿರತೆ ಸಿಗುವವರೆಗೆ ಮನೆಯ ಬಳಿಯೇ ವಾಕಿಂಗ್ ಮಾಡಲು ನಿರ್ಧರಿಸಿದಂತಿರುವ ವಾಯುವಿಹಾರಿಗಳು ತುರಹಳ್ಳಿ ಅರಣ್ಯ ವಲಯಕ್ಕೆ ಸೋಮವಾರವೂ ಕಾಲಿಡಲಿಲ್ಲ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ನಕಲಿ ವಿಡಿಯೊ ಜನರನ್ನು ಮತ್ತಷ್ಟು ಭಯಭೀತಗೊಳಿಸಿದೆ.

ತುರಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಚಿರತೆಗಳು ಒಂದೆಡೆಯಿಂದ ಮತ್ತೊಂದೆಡೆಗೆ ಆಹಾರಕ್ಕಾಗಿ ಸಂಚರಿಸುವುದು ಸಾಮಾನ್ಯ. ಹೀಗಾಗಿ, ಚಿರತೆ ಸೆರೆ ವಿಳಂಬವಾಗಿದೆ. ತುರಹಳ್ಳಿ ವ್ಯಾಪ್ತಿಯಲ್ಲಿ ಆಹಾರ ಕೊರತೆ ಇಲ್ಲ. ನೂರಾರು ಬೀದಿ ನಾಯಿಗಳಿವೆ. ಆಹಾರದ ಅಭಾವ ಕಂಡುಬಂದಾಗ ಮಾತ್ರ ಪ್ರಾಣಿಗಳು ಮನುಷ್ಯನ ಮೇಲೆ ಎರಗುತ್ತವೆ. ಚಿರತೆಗಳು ಮನುಷ್ಯರನ್ನು ಬಾಧಿಸುವ ಸಾಧ್ಯತೆ ಕಡಿಮೆ. ಜನ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕಗ್ಗಲೀಪುರ ಅರಣ್ಯ ವಲಯಾಧಿಕಾರಿ ಗೋವಿಂದರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.