ADVERTISEMENT

ಕದ್ದ ಆಭರಣ ಅಡವಿಟ್ಟು ಐಷಾರಾಮಿ ಜೀವನ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 16:56 IST
Last Updated 15 ಫೆಬ್ರುವರಿ 2021, 16:56 IST
ಜಪ್ತಿ ಮಾಡಲಾದ ಚಿನ್ನಾಭರಣ
ಜಪ್ತಿ ಮಾಡಲಾದ ಚಿನ್ನಾಭರಣ   

ಬೆಂಗಳೂರು: ಮನೆಯೊಂದರಲ್ಲಿ ಕದ್ದಿದ್ದ ಚಿನ್ನಾಭರಣಗಳನ್ನು ಅಡವಿಟ್ಟು, ಅದರಿಂದ ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಆರೋಪಿ ಮಂಜುನನ್ನು (35) ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

‘ಸುಬೇದಾರ್ ಪಾಳ್ಯ ನಿವಾಸಿಯಾದ ಮಂಜು, ಬಂಡೇಮಠ ಲೇಔಟ್‌ನಲ್ಲಿರುವ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ. ಆತನಿಂದ ₹ 20 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಯಾವುದೇ ಕೆಲಸಕ್ಕೆ ಹೋಗದೇ ಸ್ಥಳೀಯ ಯುವಕರ ಜೊತೆ ಗುಂಪು ಕಟ್ಟಿಕೊಂಡು ಆರೋಪಿ ಓಡಾಡುತ್ತಿದ್ದ. 2020ರಲ್ಲಿ ಬಂಡೇಮಠ ಲೇಔಟ್‌ನಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಮಂಜು, ಚಿನ್ನಾಭರಣ ಬ್ಯಾಗ್‌ ಕದ್ದುಕೊಂಡು ಪರಾರಿಯಾಗಿದ್ದ.’

ADVERTISEMENT

‘ಘಟನೆ ಬಗ್ಗೆ ಮನೆಯ ಮಾಲೀಕರು ದೂರು ನೀಡಿದ್ದರು. ಆರೋಪಿ, ಚಿನ್ನಾಭರಣವನ್ನು ₹10 ಲಕ್ಷಕ್ಕೆ ಫೈನಾನ್ಸ್ ಕಂಪನಿಯಲ್ಲಿ ಅಡವಿಟ್ಟಿದ್ದ. ಅದರಿಂದ ಬಂದ ಹಣದಲ್ಲೇ ಐಷಾರಾಮಿ ಜೀವನ ನಡೆಸುತ್ತಿದ್ದ. ಇತ್ತೀಚೆಗೆ ಮತ್ತೊಂದು ಮನೆಯಲ್ಲಿ ಕಳ್ಳತನ ಮಾಡಲು ಸಂಚು ರೂಪಿಸಿದ್ದ. ಠಾಣೆ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವೇಳೆಯಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಳ್ಳತನ ಕೃತ್ಯ ಬಯಲಾಗಿದೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.