ಯಲಹಂಕ: ಕೇಸರಿ ಫೌಂಡೇಶನ್ ವತಿಯಿಂದ ವಿದ್ಯಾರಣ್ಯಪುರದ ಎನ್.ಟಿ.ಐ ಮೈದಾನದಲ್ಲಿ ಆಯೋಜಿಸಿದ್ದ 2ನೇ ವರ್ಷದ ‘ನಮ್ಮ ಬ್ಯಾಟರಾಯನಪುರ-ದಸರಾ ಉತ್ಸವ’ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ವಿವಿಧ ಗ್ರಾಮಗಳ 100ಕ್ಕೂ ಹೆಚ್ಚು ದೇವರ ಮೂರ್ತಿಗಳನ್ನು ಕೂರಿಸಿದ್ದ ಪಲ್ಲಕ್ಕಿಗಳನ್ನು ಮೈದಾನಕ್ಕೆ ತರಲಾಯಿತು. ನೂರಾರು ಮಹಿಳೆಯರು ಲಲಿತ ಸಹಸ್ರನಾಮ ಪಾರಾಯಣ ಮಾಡಿದರು. ವೇದಿಕೆಯಲ್ಲಿ ದುರ್ಗಾಪರಮೇಶ್ವರಿ ದೇವಿಗೆ ವಿಶೇಷಪೂಜೆ, ವಿವಿಧ ದೇವರ ಮೂರ್ತಿಗಳಿಗೆ ಮಹಾ ಆರತಿ ನೆರವೇರಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
ನಂಜಪ್ಪ ವೃತ್ತ, ತಿಂಡ್ಲು, ಕೊಡಿಗೇಹಳ್ಳಿ ಹಾಗೂ ಸಹಕಾರನಗರದ ಮೂಲಕ ಬ್ಯಾಟರಾಯನಪುರದ ಕೋದಂಡರಾಮಸ್ವಾಮಿ ದೇವಾಲಯದವರೆಗೆ ಮೆರವಣಿಗೆ ನಡೆಯಿತು. ಡೊಳ್ಳುಕುಣಿತ, ವೀರಗಾಸೆ, ಕೀಲುಕುದುರೆ, ಚಂಡೆವಾದ್ಯ, ತಮಟೆವಾದ್ಯ, ಜನಪದ ಕಲಾತಂಡಗಳ ಪ್ರದರ್ಶನಗಳು ಶೋಭಾಯಾತ್ರೆಗೆ ವಿಶೇಷ ಮೆರುಗು ನೀಡಿದವು.
ಸಂಸದ ಡಿ.ವಿ. ಸದಾನಂದಗೌಡ, ಮಾಜಿ ಸಚಿವ ರಾಜುಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಕೇಸರಿ ಫೌಂಡೇಶನ್ ಅಧ್ಯಕ್ಷ ಎಚ್.ಸಿ. ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ. ನಾರಾಯಣ, ಬಿಜೆಪಿ ಮುಖಂಡರಾದ ಪಿ.ಕೆ.ರಾಜಗೋಪಾಲ್, ತಿಂಡ್ಲು ಜಿ.ಶ್ರೀನಿವಾಸ್, ಟಿ.ಪಿ.ಪ್ರಕಾಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.