ADVERTISEMENT

ಹಾಲು ವ್ಯಾಪಾರಿ ಕೊಲೆ: ಸ್ನೇಹಿತನೇ ಆರೋಪಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 16:10 IST
Last Updated 13 ಸೆಪ್ಟೆಂಬರ್ 2021, 16:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಕಾಡುಗೊಂಡನಹಳ್ಳಿ (ಕೆ.ಜಿ. ಹಳ್ಳಿ) ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಹಾಲು ವ್ಯಾಪಾರಿ ರವಿ ನಾಯ್ಡು ಕೊಲೆ ಪ್ರಕರಣದಲ್ಲಿ ಸ್ನೇಹಿತ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಜಾರ್ಜ್ ಅಲಿಯಾಸ್ ಪಪ್ಪಿ, ಕಾರ್ತಿಕ್ ಹಾಗೂ ಡೇನಿಯಲ್ ಬಂಧಿತರು. ಮಾತುಕತೆ ನೆಪದಲ್ಲಿ ಆ. 31ರಂದು ರವಿ ಅವರನ್ನು ತಮ್ಮ ಬಳಿ ಕರೆಸಿಕೊಂಡಿದ್ದ ಆರೋಪಿಗಳು, ಕೊಲೆ ಮಾಡಿ ಪರಾರಿಯಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ಬಾಣಸವಾಡಿ ನಿವಾಸಿ ರವಿ, ಹಾಲು ಮಾರಿ ಜೀವನ ಸಾಗಿಸುತ್ತಿದ್ದರು. ಅವರಿಗೆ ಆರೋಪಿ ಜಾರ್ಜ್ ಜೊತೆ ಸ್ನೇಹವಿತ್ತು. ಯುವತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಜಾರ್ಜ್‌, ಜಾಮೀನು ಮೇಲೆ ಇತ್ತೀಚೆಗಷ್ಟೇ ಹೊರಗೆ ಬಂದಿದ್ದ. ಹೋಟೆಲ್‌ ಆರಂಭಿಸಿದ್ದ.’

ADVERTISEMENT

‘ಜಾರ್ಜ್‌ ಜೊತೆ ನಿತ್ಯವೂ ಮಾತನಾಡುತ್ತಿದ್ದ ರವಿ, ‘ಅತ್ಯಾಚಾರಿ’ ಎಂದು ರೇಗಿಸುತ್ತಿದ್ದರು. ಆ ರೀತಿ ಮಾತನಾಡದಂತೆ ಚಾರ್ಜ್‌ ಹಲವು ಬಾರಿ ಎಚ್ಚರಿಕೆ ನೀಡಿದ್ದ. ಅದೇ ವಿಚಾರವನ್ನು ಸಹೋದರ ಕಾರ್ತಿಕ್‌ಗೆ ತಿಳಿಸಿದ್ದ ಜಾರ್ಜ್‌, ರವಿ ಅವರನ್ನು ಕೊಲೆ ಮಾಡಲು ತೀರ್ಮಾನಿಸಿದ್ದ’ ಎಂದೂ ಪೊಲೀಸರು ತಿಳಿಸಿದರು.

‘ಹಾಲು ವ್ಯಾಪಾರ ಮಾಡುತ್ತಿದ್ದ ರವಿ ಅವರಿಗೆ ಕರೆ ಮಾಡಿದ್ದ ಆರೋಪಿಗಳು, ಮಹತ್ವದ ವಿಷಯ ಮಾತನಾಡಬೇಕೆಂದು ಹೇಳಿ ನಿರ್ಜನ ಪ್ರದೇಶಕ್ಕೆ ಕರೆಸಿದ್ದರು. ಅಲ್ಲಿ ಅವರ ಮೇಲೆ ಹಲ್ಲೆ ಮಾಡಿ ಕೊಂದಿದ್ದರು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.