ಬೆಂಗಳೂರು: ಅಂಗಾಂಗ ವಿನಿಮಯ ಕಸಿಯ ಮೂಲಕ ಹೆಬ್ಬಾಳದಲ್ಲಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ರೋಗಿ ರಾಜಾಜಿನಗರದಲ್ಲಿನ ಸುಗುಣ ಆಸ್ಪತ್ರೆಯ ದಾನಿಯಿಂದ ಮೂತ್ರಪಿಂಡವನ್ನು ಪಡೆದಿದ್ದು, ಯಶಸ್ವಿಯಾಗಿ ಕಸಿ ಮಾಡಲಾಗಿದೆ.
ನಗರದಲ್ಲಿ ಮಂಗಳವಾರ ಬೆಳಿಗ್ಗೆ 4 ಗಂಟೆಗೆ ವೈದ್ಯರು ಶಸ್ತ್ರಚಿಕಿತ್ಸೆಗೆ ಸಿದ್ಧತೆ ಪ್ರಾರಂಭಿಸಿದರು. ಬೆಳಿಗ್ಗೆ 8.15ರಿಂದ 8.45ರವರೆಗೆ ಸಿಗ್ನಲ್ ಮುಕ್ತ ಸಂಚಾರ ವ್ಯವಸ್ಥೆಯನ್ನು (ಗ್ರೀನ್ ಕಾರಿಡಾರ್) ಮಾಡಲಾಗಿತ್ತು.
ಮೊದಲು ಸುಗುಣ ಆಸ್ಪತ್ರೆಯ ದಾನಿಯಿಂದ ಮೂತ್ರಪಿಂಡವನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ತರಲಾಯಿತು. ನಂತರ ಈ ಆಸ್ಪತ್ರೆಯಿಂದ ರೋಗಿಯ ಕುಟುಂಬದವರ ಮೂತ್ರಪಿಂಡವನ್ನು ಸುಗುಣ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ಹೀಗೆ ಎರಡು ಆಸ್ಪತ್ರೆಗಳ ನಡುವೆ ಅಂಗಾಂಗ ವಿನಿಮಯ ಮತ್ತು ಕಸಿ
ನಡೆಯಿತು.
‘ಬೆಳಿಗ್ಗೆ 10 ಗಂಟೆಗಾಗಲೇ ಎರಡೂ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದ್ದು, ದಾನಿ ಮತ್ತು ರೋಗಿ ಆರೋಗ್ಯವಾಗಿದ್ದಾರೆ’ ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯರು ತಿಳಿಸಿದರು.
ಅಂಗಾಂಗ ವಿನಿಮಯ ಕಸಿ: ಎರಡು ಭಿನ್ನ ಜೋಡಿಗಳ ನಡುವೆ ಅಂಗಾಂಗ ಕೊಡುಕೊಳ್ಳುವಿಕೆಗೆ ವಿನಿಮಯ ಕಸಿ ಎನ್ನಲಾಗುತ್ತದೆ. ಜೋಡಿಯಲ್ಲಿ ಒಬ್ಬರು ತೆಗೆದುಕೊಳ್ಳುವವರು (ರೋಗಿ) ಮತ್ತು ಇನ್ನೊಬ್ಬರು ಪಡೆಯುವವರು (ಕುಟುಂಬದ ಒಬ್ಬಸದಸ್ಯ) ಇರುತ್ತಾರೆ. ಕುಟುಂಬ ಸದಸ್ಯರ ರಕ್ತದ ಗುಂಪು ರೋಗಿಯೊಂದಿಗೆ ಹೊಂದಾಣಿಕೆಯಾಗದಿದ್ದಾಗ ಹೊಂದಾಣಿಕೆಯಾಗುವ ಮತ್ತೊಬ್ಬ ರೋಗಿಯಿಂದ ಅಂಗಾಂಗವನ್ನು ಪಡೆದು ಕಸಿ ಮಾಡಲಾಗುತ್ತದೆ. ಇದರಲ್ಲಿ ಇಬ್ಬರು ದಾನಿಗಳು, ಇಬ್ಬರು ಪಡೆಯುವವರು
ಇರುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.