ADVERTISEMENT

ಸವಾಲು ಎದುರಿಸಲು ಸ್ವಾವಲಂಬಿಗಳಾಗಿ: ಕಿರಣ್ ಬೇಡಿ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 20:19 IST
Last Updated 8 ಸೆಪ್ಟೆಂಬರ್ 2019, 20:19 IST
ಐಪಿಎಸ್ ಅಧಿಕಾರಿ ಸೌಮ್ಯಾ ಮಿಶ್ರಾ ಅವರನ್ನು ಕಿರಣ್ ಬೇಡಿ ಗೌರವಿಸಿದರು. ವೈದ್ಯರಾದ ಡಾ. ಪದ್ಮಿನಿ ಪ್ರಸಾದ್, ಡಾ. ಕಾಮಿನಿ ಎ. ರಾವ್ ಹಾಗೂ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಇದ್ದರು.
ಐಪಿಎಸ್ ಅಧಿಕಾರಿ ಸೌಮ್ಯಾ ಮಿಶ್ರಾ ಅವರನ್ನು ಕಿರಣ್ ಬೇಡಿ ಗೌರವಿಸಿದರು. ವೈದ್ಯರಾದ ಡಾ. ಪದ್ಮಿನಿ ಪ್ರಸಾದ್, ಡಾ. ಕಾಮಿನಿ ಎ. ರಾವ್ ಹಾಗೂ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಇದ್ದರು.   

ಬೆಂಗಳೂರು: ‘ಹೆಣ್ಣುಹುಟ್ಟಿನಿಂದಲೇ ನಾಯಕತ್ವ ಗುಣ ಹಾಗೂ ಜವಾಬ್ದಾರಿಗಳನ್ನು ನಿಭಾಯಿಸುವ ಶಕ್ತಿ ಹೊಂದಿರುತ್ತಾಳೆ. ಅದಾಗಿಯೂ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಮೆಟ್ಟಿನಿಲ್ಲಬೇಕಾದರೆ ಸ್ವಾವಲಂಬಿಗಳಾಗಬೇಕು’ ಎಂದುಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಕಿವಿ ಮಾತು ಹೇಳಿದರು.

ಬಯೋ ಜಿನೆಸಿಸ್ ಹೆಲ್ತ್ ಕ್ಲಸ್ಟರ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘5ನೇ ವಿಶ್ವ ಮಹಿಳಾ ಸಮಾವೇಶ’ ಉದ್ಘಾಟಿಸಿ ಮಾತನಾಡಿದರು.

‘ಮಹಿಳೆಯರು ಇತರರ ಮೇಲೆ ಅವಲಂಬನೆಯಾಗುವ ಮನೋಭಾವದಿಂದಹೊರಬಂದು, ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಲೆ ರೂಢಿಸಿಕೊಳ್ಳಬೇಕು.ಜೀವನದ ಅನುಭವಗಳು ಹಲವು ಪಾಠಗಳನ್ನು ಕಲಿಸಲಿವೆ. ಸಾಧನೆಯ ಹಾದಿಯಲ್ಲಿ ಸಾಗುವಾಗ ತನ್ನನ್ನು ಗಂಡಿನೊಂದಿಗೆ ಹೋಲಿಕೆ ಮಾಡಿಕೊಳ್ಳುವುದನ್ನುಹೆಣ್ಣು ಬಿಡಬೇಕಾಗುತ್ತದೆ.ಯಶಸ್ಸಿಗೆ ಅಗತ್ಯವಾದ ಧೈರ್ಯ, ಛಲ, ಕೌಶಲಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದರು.

ADVERTISEMENT

‘ಹೆಣ್ಣು ಮಕ್ಕಳು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕಿದೆ. ಆರೋಗ್ಯವಂತ ಮನಸ್ಸು, ಮನೆ ಹಾಗೂ ಸಮಾಜ ನೆಮ್ಮದಿಯುತ ಜೀವನಕ್ಕೆ ಸಹಕಾರಿಯಾಗಿದೆ. ಲಿಂಗಭೇದವನ್ನು ಮರೆತು ಯಶಸ್ಸಿನ ಕಡೆ ಸಾಗಿರಿ’ ಎಂದು ತಿಳಿಸಿದರು.

‘ನಾನು ಪ್ರತಿನಿತ್ಯ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ನನ್ನ ಬಗ್ಗೆ ತಿಳಿದಿದ್ದರೂ ಕೆಲವರು ನನ್ನನ್ನು ತಪ್ಪು ದಾರಿಗೆ ಎಳೆಯಲು ಯತ್ನಿಸಿ,ವಿಫಲರಾಗುತ್ತಿದ್ದಾರೆ’ ಎಂದರು.

ಮೈಸೂರುರಾಜವಂಶಸ್ಥೆಪ್ರಮೋದಾ ದೇವಿಒಡೆಯರ್, ‘ಮಹಿಳೆಯರಿಗೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಸಿಕ್ಕಲ್ಲಿ ಸಾಧನೆ ಸಾಕಾರವಾಗಲಿದೆ. ಸಂಸ್ಕೃತಿಯನ್ನು ಉಳಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವಕಾಶಗಳು ಸಿಗುವಂತಾಗಬೇಕು. ಕುಟುಂಬದ ಸದಸ್ಯರ ಆರೋಗ್ಯದ ಕಡೆ ಸದಾ ಗಮನಹರಿಸುವ ಮಹಿಳೆ ತನ್ನಆರೋಗ್ಯವನ್ನು ಕಡೆಗಣಿಸದಿರಲಿ’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.