ADVERTISEMENT

ಕಿತ್ತಗಾನಹಳ್ಳಿ ಕೆರೆ ರಕ್ಷಣೆಗೆ ಎನ್‌ಜಿಟಿ ಸೂಚನೆ

ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಕೇಳಿದ ಹಸಿರು ಪೀಠ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 20:27 IST
Last Updated 27 ಸೆಪ್ಟೆಂಬರ್ 2019, 20:27 IST
   

ನವದೆಹಲಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನ ಬೊಮ್ಮಸಂದ್ರ ಬಳಿ ಇರುವ ಕಿತ್ತಗಾನಹಳ್ಳಿ ಕೆರೆಯ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದೆ.

ಕೈಗಾರಿಕಾ ಪ್ರದೇಶದ ವಿಷಪೂರಿತ ನೀರು ಕೆರೆಯನ್ನು ಸೇರಿ ಕಲುಷಿತಗೊಳಿಸುತ್ತಿದೆ. ಜನ– ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದರೂ ಗಮನ ಹರಿಸಲಾಗುತ್ತಿಲ್ಲ ಎಂದು ದೂರಿ ಸಂಜಯ್ ರಾವ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಆದರ್ಶ್‌ ಕುಮಾರ್‌ ಗೋಯೆಲ್‌ ನೇತೃತ್ವದ ಪ್ರಧಾನ ಪೀಠ ಈ ಆದೇಶ ನೀಡಿದೆ.

ಕೆರೆಯ ದುಃಸ್ಥಿತಿ ಕುರಿತು ಗಮನ ಹರಿಸುವ ಮೂಲಕ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಒಂದು ತಿಂಗಳೊಳಗೆ ಈ ಕುರಿತ ವರದಿ ಸಲ್ಲಿಸಬೇಕು ಎಂದು ಮಂಡಳಿಗೆ ಸೂಚಿಸಿರುವ ಹಸಿರು ಪೀಠ, ವಿಚಾರಣೆಯನ್ನು 2020ರ ಜನವರಿ 10ಕ್ಕೆ ಮುಂದೂಡಿದೆ.

ADVERTISEMENT

ನಾರಾಯಣ ಹೃದಯಾಲಯದ ಹಿಂಭಾಗದಲ್ಲಿ ಇರುವ ಈ ಕೆರೆಗೆ ಕೈಗಾರಿಕೆಗಳ ವಿಷಪೂರಿತ ನೀರು, ತ್ಯಾಜ್ಯ ಸೇರಿಕೊಳ್ಳುತ್ತಿದೆ. ಈ ಬಗ್ಗೆ ಸಾರ್ವಜನಿಕರು ಅನೇಕ ಬಾರಿ ಪ್ರತಿಭಟನೆ ನಡೆಸಿ ಬೊಮ್ಮಸಂದ್ರ ಪುರಸಭೆಯ ಗಮನ ಸೆಳೆದರೂ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ದೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.