ಬೆಂಗಳೂರು: ವಿವಿಧ ಹುದ್ದೆಗಳ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾವಿತ್ರ್ಯತೆ, ಗೋಪ್ಯ, ಪಾರದರ್ಶಕತೆ ಕಾಪಾಡುವ ಜೊತೆಗೆ, ತ್ವರಿತವಾಗಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಗೋಪ್ಯ ವಿಭಾಗ ಮತ್ತು ಐಟಿ (ಮಾಹಿತಿ ತಂತ್ರಜ್ಞಾನ) ಕೋಶವನ್ನು ಬಲಪಡಿಸಬೇಕೆಂಬ ಕೆಪಿಎಸ್ಸಿ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಈಗಾಗಲೇ ಮಂಜೂರಾಗಿರುವ ಒಂದು ಜಂಟಿ ಪರೀಕ್ಷಾ ನಿಯಂತ್ರಕರ ಅಧೀನದಲ್ಲಿ ಎ, ಬಿ ಮತ್ತು ಸಿ ಎಂದು ಮೂರು ಹೆಚ್ಚುವರಿ ಗೋಪ್ಯ ಶಾಖೆಗಳಿಗೆ ಒಟ್ಟು 27 ಮತ್ತು ಹೊಸತಾಗಿ ಸೃಜಿಸುವ ಐಟಿ ಕೋಶಕ್ಕೆ 7 ಸೇರಿ ಒಟ್ಟು 34 ಹುದ್ದೆಗಳನ್ನು ಸೃಜಿಸಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ.
‘ಹೊಸತಾಗಿ ಸೃಜಿಸಿರುವ ಐಟಿ ಕೋಶವನ್ನು ಬಳಸಿಕೊಂಡು ಮಾನವ ಹಸ್ತಕ್ಷೇಪವನ್ನು ಆದಷ್ಟು ಕಡಿಮೆ ಮಾಡಬೇಕು. ಕೆಪಿಎಸ್ಸಿಯಲ್ಲಿ ಇ– ಆಫೀಸ್ ಅಳವಡಿಸಿಕೊಂಡು, ಕೆಲಸದ ಸಾಮರ್ಥ್ಯದ ಮೂಲಕ ಹೆಚ್ಚಿನ ಪ್ರತಿಫಲ ಪಡೆಯಬೇಕು. ಈಗಿರುವ ಕೆಲಸಗಳ ಹಂತಗಳನ್ನು ಕಡಿತಗೊಳಿಸಿ, ಪರಿಶೀಲನಾ ಹಂತಗಳನ್ನು ಸರಳಗೊಳಿಸಬೇಕು’ ಎಂದೂ ಕೆಪಿಎಸ್ಸಿಗೆ ಸರ್ಕಾರ ಸೂಚಿಸಿದೆ.
ಕೆಪಿಎಸ್ಸಿಯು ಸುಧಾರಣೆಗೆ ಈ ಹಿಂದೆ ರಾಜ್ಯ ಸರ್ಕಾರ ರಚಿಸಿದ್ದ ಪಿ.ಸಿ. ಹೋಟಾ ಸಮಿತಿ, ಅಲ್ಲಿನ ಗಣಕ ಕೇಂದ್ರವನ್ನು ಬಲಪಡಿಸಬೇಕೆಂದು ಶಿಫಾರಸು ಮಾಡಿತ್ತು. ಅದರಂತೆ 2018ರಲ್ಲಿಯೇ ಸರ್ಕಾರಕ್ಕೆ ಕೆಪಿಎಸ್ಸಿ ಕಾರ್ಯದರ್ಶಿ ಪ್ರಸ್ತಾವ ಸಲ್ಲಿಸಿದ್ದರು. ಇತ್ತೀಚೆಗೆ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದ ವಿಕಾಸ್ ಕಿಶೋರ್ ಸುರಳ್ಕರ್ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.