ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಮುಖ್ಯ ಕಚೇರಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಅಭ್ಯರ್ಥಿಗಳಿಂದ ಹಣ ಪಡೆದು ವಂಚಿಸುತ್ತಿದ್ದ ಅನಿಲ್ಕುಮಾರ್ (27) ಎಂಬಾತನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
‘ಕೋಲಾರ ಜಿಲ್ಲೆಯ ಅನಿಲ್ಕುಮಾರ್, ಡಿಪ್ಲೊಮಾ ಮುಗಿಸಿ ಕೆಲದಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆ ಕೆಲಸ ಬಿಟ್ಟಿದ್ದ ಆತ, ವಂಚನೆಯಿಂದಲೇ ಹಣ ಸಂಪಾದಿಸುತ್ತಿದ್ದ’ ಎಂದು ಪೊಲೀಸರು ಹೇಳಿದರು.
‘ಇತ್ತೀಚೆಗೆ ದೂರುದಾರ ಗಿರೀಶ್ ಎಂಬುವರನ್ನು ಸಂಪರ್ಕಿಸಿದ್ದ ಆರೋಪಿ, ತಾನು ಕೆಪಿಎಸ್ಸಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದ. ಯಾರಾದರೂ ಅಭ್ಯರ್ಥಿಗಳಿದ್ದರೆ ಕೆಪಿಎಸ್ಸಿ ಕಚೇರಿಯಲ್ಲಿ ಬೆರಳಚ್ಚುಗಾರ ಕೆಲಸ ಕೊಡಿಸುವುದಾಗಿ ತಿಳಿಸಿದ್ದ. ಮೊದಲಿಗೆ ₹18 ಸಾವಿರ ಕೊಡಬೇಕು. ₹ 8 ಸಾವಿರ ಖರ್ಚಾಗುತ್ತದೆ. ಉಳಿದ ₹ 10 ಸಾವಿರ ವಾಪಸು ಖಾತೆಗೆ ಜಮೆ ಆಗುತ್ತದೆಂದು ಹೇಳಿದ್ದ.’
‘ಆರೋಪಿ ಮಾತು ನಂಬಿದ್ದ ಗಿರೀಶ್, ಆತನ ಸಿಂಡಿಕೇಟ್ ಬ್ಯಾಂಕ್ ಖಾತೆಗೆ ₹8 ಸಾವಿರ ವರ್ಗಾವಣೆ ಮಾಡಿದ್ದರು. ಎಂ.ಎಸ್. ಬಿಲ್ಡಿಂಗ್ ಬಳಿ ಖುದ್ದು ಭೇಟಿಯಾಗಿ ₹ 10 ಸಾವಿರ ನಗದು ನೀಡಿದ್ದರು. ಅದಾಗಿ ಹಲವು ದಿನವಾದರೂ ಆರೋಪಿ ಕೆಲಸ ಕೊಡಿಸಿರಲಿಲ್ಲ. ವಂಚನೆಗೀಡಾಗಿದ್ದು ತಿಳಿಯುತ್ತಿದ್ದಂತೆ ಗಿರೀಶ್ ದೂರು ನೀಡಿದ್ದರು’ ಎಂದು ಪೊಲೀಸರು ವಿವರಿಸಿದರು.
ಹಲವರಿಗೆ ವಂಚನೆ: ‘ಬಂಧಿತ ಆರೋಪಿಯಿಂದ ₹ 25 ಸಾವಿರ ನಗದು ಜಪ್ತಿ ಮಾಡಲಾಗಿದೆ. ಇದುವರೆಗೂ ಈತ ನಾಲ್ವರು ಅಭ್ಯರ್ಥಿಗಳಿಗೆ ವಂಚನೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.
‘ಬೆರಳಚ್ಚುಗಾರ, ಕ್ಲರ್ಕ್, ಕಚೇರಿ ಸಹಾಯಕ, ಹೀಗೆ ನಾನಾ ಹುದ್ದೆಗಳ ಹೆಸರಿನಲ್ಲಿ ಆರೋಪಿ ಹಲವರನ್ನು ವಂಚಿಸಿರುವ ಮಾಹಿತಿ ಇದೆ. ಕೆಲವರಷ್ಟೇ ಠಾಣೆಗೆ ಬಂದು ಹೇಳಿಕೆ ನೀಡಿದ್ದಾರೆ. ಆರೋಪಿಯಿಂದ ಯಾರಿಗಾದರೂ ವಂಚನೆಯಾಗಿದ್ದರೆ ವಿಧಾನಸೌಧ ಠಾಣೆಗೆ (080–22942590, 22942086) ಮಾಹಿತಿ ನೀಡಬಹುದು’ ಎಂದು ತಿಳಿಸಿದರು.
ಕೆಪಿಎಸ್ಸಿ ಹೆಸರಿನಲ್ಲಿ ಬ್ಯಾಡ್ಜ್
‘ಅಭ್ಯರ್ಥಿಗಳು ನೋಡಿದ ಕೂಡಲೇ ತಾನೊಬ್ಬ ಕೆಪಿಎಸ್ಸಿ ನೌಕರ ಎಂಬುದು ಗೊತ್ತಾಗಬೇಕೆಂದು ಆರೋಪಿ ಬ್ಯಾಡ್ಜ್ ಮಾಡಿಸಿದ್ದ. ‘ಅನಿಲ್ಕುಮಾರ್, ಕೆಪಿಎಸ್ಸಿ’ ಎಂದು ಬ್ಯಾಡ್ಜ್ನಲ್ಲಿ ಬರೆಸಿದ್ದ. ಅಭ್ಯರ್ಥಿಗಳನ್ನು ಭೇಟಿಯಾಗಲು ಹೋದಾಗ, ಅಂಗಿಯ ಕಿಸೆಗೆ ಬ್ಯಾಡ್ಜ್ ಹಾಕಿಕೊಳ್ಳುತ್ತಿದ್ದ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.