ADVERTISEMENT

ಕೆ.ಆರ್‌.ಪುರ – ಬೈಯಪ್ಪನಹಳ್ಳಿ ಪ್ರಯಾಣ ಹೈರಾಣ

2.1 ಕಿ.ಮೀ ಕಾಮಗಾರಿ ಬಾಕಿ l ಆಟೊ ಪ್ರಯಾಣ ದುಬಾರಿ l ಫೀಡರ್‌ ಸೇವೆ ಹೆಚ್ಚಿಸಿದ ಬಿಎಂಟಿಸಿ

ವಿಜಯಕುಮಾರ್ ಎಸ್.ಕೆ.
Published 30 ಮಾರ್ಚ್ 2023, 21:08 IST
Last Updated 30 ಮಾರ್ಚ್ 2023, 21:08 IST
ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಿಂದ ಕೆ.ಆರ್‌.ಪುರ ನಿಲ್ದಾಣಕ್ಕೆ ಬಿಎಂಟಿಸಿ ಬಸ್‌ ಮೂಲಕ ಫೀಡರ್ ಸೇವೆ ಒದಗಿಸುತ್ತಿರುವುದು  – -ಪ್ರಜಾವಾಣಿ ಚಿತ್ರ
ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಿಂದ ಕೆ.ಆರ್‌.ಪುರ ನಿಲ್ದಾಣಕ್ಕೆ ಬಿಎಂಟಿಸಿ ಬಸ್‌ ಮೂಲಕ ಫೀಡರ್ ಸೇವೆ ಒದಗಿಸುತ್ತಿರುವುದು  – -ಪ್ರಜಾವಾಣಿ ಚಿತ್ರ   

ಬೆಂಗಳೂರು: ವೈಟ್‌ಫೀಲ್ಡ್‌ ಮೆಟ್ರೊ ಪ್ರಯಾಣಿಕರಿಗೆ ಕೆ.ಆರ್‌.ಪುರ–ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣಗಳ ನಡುವಿನ ಪ್ರಯಾಣ ದುಬಾರಿ ಆಗಿರುವುದರ ಜತೆಗೆ ಜನರನ್ನು ಹೈರಾಣ ಮಾಡುತ್ತಿದೆ. ಫೀಡರ್ ಸೇವೆಗೆ ಬಿಎಂಟಿಸಿ ಬಸ್‌ಗಳನ್ನು ಒದಗಿಸಿದ್ದರೂ, ಬೆಳಿಗ್ಗೆ ಮತ್ತು ಸಂಜೆ ವೇಳೆಯ ದಟ್ಟಣೆ ಅವಧಿಯಲ್ಲಿ ಜನ ಪರದಾಡುವಂತಾಗಿದೆ.

ನೇರಳೆ ಮಾರ್ಗವೀಗ ವೈಟ್‌ಫೀಲ್ಡ್‌ ತನಕ ವಿಸ್ತರಣೆಯಾಗಿದೆ. ಆದರೆ, ಬೈಯಪ್ಪನಹಳ್ಳಿಯಿಂದ ಕೆ.ಆರ್‌.ಪುರ ತನಕ 2.1 ಕಿಲೋ ಮೀಟರ್‌ನಲ್ಲಿ ಕಾಮಗಾರಿ ಬಾಕಿ ಇದೆ. ಈ ಎರಡು ನಿಲ್ದಾಣಗಳ ನಡುವೆ ಬಸ್ ಮತ್ತು ಆಟೊರಿಕ್ಷಾವನ್ನೇ ಜನ ಅವಲಂಬಿಸಬೇಕಿದೆ. ಫೀಡರ್ ಸೇವೆಯನ್ನು ಬಿಎಂಟಿಸಿ ಆರಂಭಿಸಿದೆ.

ಮಂಗಳವಾರದ ತನಕ ಕಡಿಮೆ ಇದ್ದ ಬಸ್‌ಗಳ ಸಂಖ್ಯೆಯನ್ನು ಬುಧವಾರ 11ಕ್ಕೆ ಏರಿಕೆ ಮಾಡಿದೆ. ಈ ಪೈಕಿ ನಾಲ್ಕು ಹವಾನಿಯಂತ್ರಿತ ವಜ್ರ (ವೋಲ್ವೊ) ಬಸ್‌ಗಳು ಕಾರ್ಯಾಚರಣೆ ಮಾಡಿದವು. ಒಂದು ಬಸ್‌ ದಿನಕ್ಕೆ 35 ಟ್ರಿಪ್‌ಗಳನ್ನು(ಸುತ್ತುವಳಿ) ಒದಗಿಸುತ್ತಿವೆ. ಮಧ್ಯಾಹ್ನ 2.30ರಿಂದ ಕಾರ್ಯಾಚರಣೆ ಆರಂಭಿಸಿ ರಾತ್ರಿ 10.30ರವರೆಗೆ 20 ಟ್ರಿಪ್ ಮತ್ತು ಮರುದಿನ ಬೆಳಿಗ್ಗೆ 5ರಿಂದ ಆರಂಭವಾಗಿ ಮಧ್ಯಾಹ್ನ 12.30ರ ತನಕ 15 ಟ್ರಿಪ್‌ಗಳನ್ನು ಚಾಲಕ →ಮತ್ತು ನಿರ್ವಾಹಕರು →ನಿರ್ವಹಿಸಬೇಕು. →ಇಬ್ಬರು →ಸಿಬ್ಬಂದಿಯನ್ನು ಕೆ.ಆರ್.→ಪುರ ನಿಲ್ದಾಣದ ಬಳಿ →ಬಿಎಂಟಿಸಿ ನಿಯೋಜಿಸಿ →ನಿರ್ವಹಣೆ ಮಾಡುತ್ತಿದೆ.

ADVERTISEMENT

ಈ ಬಸ್‌ಗಳು ಮೆಟ್ರೊ ನಿಲ್ದಾಣಗಳ ಬಾಗಿಲ ಬಳಿಗೆ ಬರುತ್ತಿದ್ದು, ಪ್ರಯಾಣಿಕರಿಗೆ ಅನುಕೂಲ ಆಗುತ್ತಿದೆ. ಫೀಡರ್ ಸೇವೆ ಜತೆಗೆ ಮಾರತಹಳ್ಳಿ, ಐಟಿಪಿಎಲ್‌, ವೈಟ್‌ಫೀಲ್ಡ್‌ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಮೆಟ್ರೊ ಪ್ರಯಾಣಿಕರಿಗೆ ಫೀಡರ್ ಸೇವೆಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದರು.

ಆದರೆ, ಈ ಎರಡು ನಿಲ್ದಾಣಗಳ ನಡುವಿನ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಬಸ್‌ಗಳು ಸಿಲುಕಿಕೊಂಡರೆ ಪ್ರಯಾಣಿಕರು ಕಾಯಬೇಕಾದ ಸ್ಥಿತಿ ಇದೆ. ಬೆಳಿಗ್ಗೆ ಮತ್ತು ಸಂಜೆ ದಟ್ಟಣೆ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಅದೇ ವೇಳೆ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಬಸ್‌ಗಳು ದಟ್ಟಣೆಯಲ್ಲಿ ಸಿಲುಕಿಕೊಳ್ಳುತ್ತಿವೆ.

ಬಸ್‌ ಹತ್ತಿರುವ ಪ್ರಯಾಣಿಕರು ಬಸ್‌ನಲ್ಲೇ ಕಾಯುತ್ತಿದ್ದರೆ, ಬಸ್‌ಗಳಿಗಾಗಿ ಮೆಟ್ರೊ ರೈಲು ನಿಲ್ದಾಣಗಳ ಬಳಿಕ ಕಾಯುವ ಅನಿವಾರ್ಯವೂ ಎದುರಾಗುತ್ತಿದೆ. ತುರ್ತಾಗಿ ತೆರಳಬೇಕಾದವರು ಆಟೊರಿಕ್ಷಾಗಳನ್ನು ಹತ್ತಲು ಪ್ರಯತ್ನಿಸಿದರೆ ದುಬಾರಿ ದರ ತೆತ್ತಬೇಕಾಗುತ್ತಿದೆ. ಕನಿಷ್ಠ ₹150ರಿಂದ ₹200 ತನಕ ದರವನ್ನು ಆಟೊ ಚಾಲಕರು ಕೇಳುತ್ತಿದ್ದಾರೆ. ಅನಿವಾರ್ಯ ಇದ್ದವರು ದುಬಾರಿ ದರ ತೆತ್ತು ಪ್ರಯಾಣ ಮಾಡುತ್ತಿದ್ದಾರೆ. ಈ ಎರಡು ನಿಲ್ದಾಣಗಳ ನಡುವೆ ಬಾಕಿ ಇರುವ ಕಾಮಗಾರಿ ಪೂರ್ಣಗೊಳ್ಳಲು ಇನ್ನು ಕನಿಷ್ಠ ಮೂರು ತಿಂಗಳು ಬೇಕಾಗಲಿದೆ. ಅಲ್ಲಿಯ ತನಕ ಎರಡೂ ನಿಲ್ದಾಣಗಳ ಬಳಿ ಮುಂಗಡ ಪಾವತಿ(ಪ್ರೀ ಪೇಯ್ಡ್‌) ಆಟೊ ಕೌಂಟರ್‌ಗಳನ್ನು ತೆರೆದರೆ ಅನುಕೂಲ ಆಗಲಿದೆ ಎಂದು ಪ್ರಯಾಣಿಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.