ಬೆಂಗಳೂರು: ‘ಜವಾಹರಲಾಲ್ ನೆಹರು ಈ ದೇಶಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಅವರಿಗೇನು ಗೊತ್ತಿದೆ. ಇತಿಹಾಸ ಗೊತ್ತಿಲ್ಲದವರು ಏನು ಬೇಕಾದರೂ ಮಾತನಾಡಬಹುದು’ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡ ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರ ಸಂವಿಧಾನದ 370ನೇ ವಿಧಿ ರದ್ದುಪಡಿಸಿರುವ ಕುರಿತು ನಗರದಲ್ಲಿ ಶುಕ್ರವಾರ ಉಪನ್ಯಾಸ ನೀಡಿದ್ದ ಸಂತೋಷ್, ‘ನೆಹರೂ ಅವರ ಎಡವಟ್ಟುಗಳಿಂದ ಜಮ್ಮು ಮತ್ತು ಕಾಶ್ಮೀರ ಹಿಂಸಾಚಾರದ ತಾಣವಾಗಿತ್ತು. ಅದನ್ನು ಮೋದಿ ಸರಿಪಡಿಸಿದ್ದಾರೆ’ ಎಂದು ಹೇಳಿದ್ದರು. ಈ ಹೇಳಿಕೆಗೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಇದನ್ನೂ ಓದಿ...ರಾಮಮಂದಿರ ಕಟ್ಟಿಯೇ ತೀರುತ್ತೇವೆ: ಬಿ.ಎಲ್.ಸಂತೋಷ್
‘ನೆಹರು ಇಲ್ಲದಿದ್ದರೆ ಕಾಶ್ಮೀರ ದೇಶದಲ್ಲಿ ಉಳಿಯುತ್ತಿರಲಿಲ್ಲ. ನೆಹರು, ಶಾಸ್ತ್ರಿಯಿಂದ ಕಾಶ್ಮೀರ ನಮ್ಮಲ್ಲೇ ಉಳಿದಿದೆ. ಸಂತೋಷ್ ಅವರಿಗೆ ಇತಿಹಾಸ ಗೊತ್ತಿಲ್ಲ. ಸುಳ್ಳಿನ ಮೂಲಕ ಜನರ ದಾರಿ ತಪ್ಪಿಸುವುದಷ್ಟೇ ಅವರ ಗುರಿ’ ಎಂದರು.
‘ನೆಹರು ಬಗ್ಗೆ ಮಾತನಾಡಲು ಸಂತೋಷ್ ಅವರಿಗೆ ಹಕ್ಕಿಲ್ಲ. ಆರ್ಎಸ್ಎಸ್ ಕೊಡುಗೆ ಏನು ಎನ್ನುವುದನ್ನು ಅವರು ಮೊದಲು ಹೇಳಲಿ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.