ಕೆಎಸ್ಆರ್ಟಿಸಿ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಸಂಚಾರ ಪೊಲೀಸರು ಪ್ರಯಾಣಿಕರ ಸಮೇತ ಕೆಎಸ್ಆರ್ಟಿಸಿ ಬಸ್ ಜಪ್ತಿ ಮಾಡಿ ಠಾಣೆಗೆ ಕರೆದೊಯ್ದ ಘಟನೆ ಸಂಜಯನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ವಿಡಿಯೊ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಂಚಾರ ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.
ಹೊಸಪೇಟೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಬಸ್ ಚಾಲಕ ಎಸ್ಟೀಮ್ ಮಾಲ್ ಮುಂದೆ ನಿಲುಗಡೆ ಮಾಡಿದ ಎಂಬ ಕಾರಣಕ್ಕೆ ಬಸ್ ಒಳಗೆ ಹೋದ ಕಾನ್ಸ್ಟೆಬಲ್ ಕುಮಾರ, ‘ಎಸ್ಟೀಮ್ ಮಾಲ್ ಮುಂದೆ ನಿಲುಗಡೆ ಇಲ್ಲ’ ಎಂದು ಚಾಲಕನಿಗೆ ಬೈದಿದ್ದಾರೆ. ಬಳಿಕ ಬಸ್ ಅನ್ನು ಪ್ರಯಾಣಿಕರ ಸಮೇತ ಠಾಣೆಗೆ ಕರೆತಂದಿದ್ದಾರೆ.
ಕಚೇರಿ, ಶಾಲಾ, ಕಾಲೇಜಿಗೆ ತೆರಳಬೇಕಿದ್ದು, ಬಸ್ ಜಪ್ತಿ ಮಾಡದೇ ಬಿಟ್ಟುಬಿಡಿ ಎಂದು ಪ್ರಯಾಣಿಕರು ಮನವಿ ಮಾಡಿದರೂ ಪೊಲೀಸರು, ಪರ್ಯಾಯ ವ್ಯವಸ್ಥೆ ಮಾಡದೆ ಠಾಣೆಯಲ್ಲಿ ಇರಿಸಿದ್ದಾರೆ. ಪೊಲೀಸರ ತಪ್ಪು ಪ್ರಶ್ನೆ ಮಾಡಿದ್ದಕ್ಕೆ ಪ್ರಯಾಣಿಕರಿಗೆ ನಿಮ್ಮ ಮೇಲೆ ಎಫ್ಐಆರ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ನಡುವೆ ಪ್ರಯಾಣಿಕರು, ಚಾಲಕ ಹಾಗೂ ಪೊಲೀಸರ ನಡುವೆ ಮಾತಿನಕ ಚಕಮಕಿ ನಡೆದಿದೆ.
ಕೊನೆಗೆ ಪ್ರಯಾಣಿಕರು ಬೇರೆ ಬಸ್ಗಳಲ್ಲಿ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.