ಬೆಂಗಳೂರು: ಅನುಪಯುಕ್ತ ಹಳೇ ಬಸ್ ಅನ್ನುಸ್ತ್ರೀ ಶೌಚಾಲಯವಾಗಿ ಕೆಎಸ್ಆರ್ಟಿಸಿ ಮಾರ್ಪಡಿಸಿದೆ. ಈ ಶೌಚಾಲಯವನ್ನು ಗುರುವಾರ ಉದ್ಘಾಟಿಸಲಾಯಿತು.
‘ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಈ ಶೌಚಾಲಯ ತೆರೆಯಲಾಗಿದ್ದು, ಮಹಿಳಾ ಪ್ರಯಾಣಿಕರು ಬಳಕೆ ಮಾಡಿಕೊಳ್ಳಬೇಕು’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
‘ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಯೋಜನೆಗೆ ಇದು ಪೂರಕವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧೆಡೆ ಈ ರೀತಿಯ ಶೌಚಾಲಯ ತೆರೆಯಲಾಗುವುದು’ ಎಂದರು.
‘ಇದನ್ನು ಏಕಕಾಲಕ್ಕೆ ಐದು ಮಂದಿ ಉಪಯೋಗಿಸಬಹುದು. ಸ್ಯಾನಿಟರಿ ನ್ಯಾಪ್ಕಿನ್, ವೆಂಡಿಂಗ್ ಮೆಷಿನ್ಗಳನ್ನು ಅಳವಡಿಸಲಾಗಿದೆ.ಈ ಬಸ್ ಸಂಪೂರ್ಣ ಸೌರಶಕ್ತಿ ವ್ಯವಸ್ಥೆ ಹೊಂದಿದೆ.ಸೆನ್ಸರ್ ದೀಪಗಳು, ಮಗುವಿಗೆ ಹಾಲುಣಿಸುವ ಸ್ಥಳ, ಕೈ ತೊಳೆಯುವ ವ್ಯವಸ್ಥೆ, ಮಕ್ಕಳ ಡೈಪರ್ ಬದಲಿಸುವ ಸ್ಥಳಗಳನ್ನು ಒಳಗೊಂಡಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.