ADVERTISEMENT

ಬೆಂಗಳೂರು: ‘ಪ್ರಿಯತಮೆ ಮಾತು ಬಿಟ್ಟಿದ್ದಕ್ಕೆ ಕಾರು ಜಖಂಗೊಳಿಸಿದ’

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 17:27 IST
Last Updated 16 ಜುಲೈ 2021, 17:27 IST
ಯುವಕನ ಕಲ್ಲು ತೂರಾಟದಿಂದ ಹಾನಿಗೊಳಗಾದ ಕಾರು
ಯುವಕನ ಕಲ್ಲು ತೂರಾಟದಿಂದ ಹಾನಿಗೊಳಗಾದ ಕಾರು   

ಬೆಂಗಳೂರು: ತನ್ನ ಪ್ರಿಯತಮೆ ಸರಿಯಾಗಿ ಮಾತನಾಡುತ್ತಿಲ್ಲವೆಂಬ ಕಾರಣಕ್ಕೆ ಸಿಟ್ಟಾದ ಆರೋಪಿ ಸತೀಶ್ ಎಂಬಾತ, ರಸ್ತೆ ಅಕ್ಕ–ಪಕ್ಕದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ದೊಣ್ಣೆಯಿಂದ ಹೊಡೆದು ಜಖಂಗೊಳಿಸಿದ್ದಾನೆ.

ಬಸವೇಶ್ವರನಗರ ಠಾಣೆ ವ್ಯಾಪ್ತಿಯ ಕುರುಬರಹಳ್ಳಿ ಪೈಪ್‌ಲೈನ್ ರಸ್ತೆಯಲ್ಲಿ ಗುರುವಾರ ರಾತ್ರಿ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಸತೀಶ್‌ನನ್ನು ಬಂಧಿಸಿದ್ದಾರೆ.

‘ಸ್ಥಳೀಯ ಜೆ.ಸಿ. ನಗರ ನಿವಾಸಿ ಸತೀಶ್, ಪೀಠೋಪಕರಣ ಕೆಲಸ ಮಾಡುತ್ತಿದ್ದ. ತಮಿಳುನಾಡಿನ ಯುವತಿಯನ್ನು ಕೆಲ ವರ್ಷದಿಂದ ಪ್ರೀತಿಸುತ್ತಿದ್ದ. ಪ್ರೇಮಿಗಳು ನಿತ್ಯವೂ ಮಾತನಾಡುತ್ತಿದ್ದರು. ಹಲವು ಬಾರಿ ಭೇಟಿ ಆಗಿದ್ದರು. ಈ ಬಗ್ಗೆ ಆರೋಪಿಯೇ ಹೇಳಿಕೆ ನೀಡಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಸತೀಶ್‌ನಿಂದ ದೂರವಿರಲಾರಂಭಿಸಿದ್ದ ಯುವತಿ ಹೆಚ್ಚು ಮಾತನಾಡುತ್ತಿರಲಿಲ್ಲ. ಕರೆಯನ್ನೂ ಸ್ವೀಕರಿಸುತ್ತಿರಲಿಲ್ಲ. ಸ್ವೀಕರಿಸಿದರೂ ಕೆಲ ಕ್ಷಣಗಳಲ್ಲಿ ಕರೆ ಕಡಿತಗೊಳಿಸುತ್ತಿದ್ದರು. ಗುರುವಾರ ರಾತ್ರಿಯೂ ಯುವತಿ ಕರೆ ಸ್ವೀಕರಿಸಿರಲಿಲ್ಲ. ಸಿಟ್ಟಾದ ಸತೀಶ್, ಮದ್ಯ ಕುಡಿದು ದ್ವಿಚಕ್ರ ವಾಹನದಲ್ಲಿ ಸುತ್ತಾಡಿದ್ದ. ಪೈಪ್‌ಲೈನ್ ರಸ್ತೆಯಲ್ಲಿ ನಿಲ್ಲಿಸಿದ್ದ 12 ವಾಹನಗಳಿಗೆ ದೊಣ್ಣೆಯಿಂದ ಹೊಡೆದು ಗಾಜು, ಕಿಟಕಿ ಹಾಗೂ ಕನ್ನಡಿ ಒಡೆದುಹಾಕಿದ್ದ’ ಎಂದೂ ಮೂಲಗಳು ತಿಳಿಸಿವೆ.

‘ಆರೋಪಿ ಕೃತ್ಯದ ಬಗ್ಗೆ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಗಸ್ತಿನಲ್ಲಿದ್ದ ಇನ್‌ಸ್ಪೆಕ್ಟರ್ ಯರ್ರಿಸ್ವಾಮಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಹೋಗಿ ಆರೋಪಿಯನ್ನು ಬಂಧಿಸಿದರು. ದೊಣ್ಣೆ ಜಪ್ತಿ ಮಾಡಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.