
ರಾಜರಾಜೇಶ್ವರಿನಗರ: ಕುವೆಂಪು ಸೇರಿದಂತೆ ಹಲವು ದಾರ್ಶನಿಕರು, ಕವಿಗಳು ನಾಡಿನ ಸಂಸ್ಕೃತಿ, ಸಾಹಿತ್ಯ, ಇತಿಹಾಸವನ್ನು ಉಳಿಸಿದ್ದಾರೆ. ಅವರ ಆದರ್ಶ, ಚಿಂತನೆಗಳನ್ನು ಯುವಜನಾಂಗ ಮೈಗೂಡಿಸಿಕೊಳ್ಳಬೇಕು ಎಂದು ಸಾಹಿತಿ ಎಚ್.ತುಕಾರಾಂ ಹೇಳಿದರು.
ರಾಜರಾಜೇಶ್ವರಿನಗರ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು, ವಾಸುದೇವ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಮಲ್ಲತ್ತಹಳ್ಳಿಯ ಕನ್ಯಾಕುಮಾರಿ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕುವೆಂಪು ಅವರ 121ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕುವೆಂಪು ಅವರ ಪುಸ್ತಕ ಪ್ರತಿಯೊಬ್ಬರು ಓದಬೇಕು. ಜಾತಿ ವ್ಯವಸ್ಥೆ ವಿರುದ್ಧ ಕೃತಿಗಳ ಮೂಲಕ ಜಾಗೃತಿ ಮೂಡಿಸಿ, ಸಮಸಮಾಜ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ವಿಶ್ವಮಾನವ’ ಎಂದರು.
ಲೇಖಕ ವಾದಿರಾಜ ಮಾತನಾಡಿ, ‘ಕುವೆಂಪು ಅವರ ಭಾವಚಿತ್ರ, ಪುಸ್ತಕ ಪ್ರತಿಮನೆಯಲ್ಲಿರಬೇಕು. ಆ ಕೃತಿಗಳನ್ನು ಓದಿ ಮುಂದಿನ ಪೀಳಿಗೆಗೆ ವಿಚಾರಗಳನ್ನು ತಿಳಿಸಬೇಕು. ನಾವೆಲ್ಲರೂ ಕನ್ನಡವನ್ನು ಉಳಿಸಬೇಕು’ ಎಂದರು.
ಕುವೆಂಪು ಭಾಷಾಭಾರತಿ ಸದಸ್ಯ ಪ್ರೊ.ನಾರಾಯಣಘಟ್ಟ, ಕನ್ನಡ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ತಿಮ್ಮಯ್ಯ, ಲೇಖಕ ಬ್ಯಾಡರಹಳ್ಳಿ ಶಿವರಾಜ್, ಗಾಯಕ ಚೌಡಯ್ಯ, ಯುವ ಕವಿ ಉದಂತ ಶಿವಕುಮಾರ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಎಂ.ಗಿರಿಯಪ್ಪ, ಕಸಾಪ ಪ್ರಧಾನ ಕಾರ್ಯದರ್ಶಿ ಡಿ.ಎಂ.ಗೋಪಾಲಕೃಷ್ಣ, ನನ್ ಮಿನಿ ರೇಡಿಯೊ ವ್ಯವಸ್ಥಾಪಕ ಹರೀಶ್, ಮಧುನಂದನ್, ವಿನಾಯಕ್ ಪೆಟ್ಲೆ, ಶಶಿಕುಮಾರ್, ವೀರಭದ್ರೆಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.