ADVERTISEMENT

ಶೆಡ್‌ನೊಳಗೆ ನುಗ್ಗಿದ ಟ್ಯಾಂಕರ್: ಕಾರ್ಮಿಕ ದುರ್ಮರಣ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 22:22 IST
Last Updated 18 ಜನವರಿ 2020, 22:22 IST

ಬೆಂಗಳೂರು: ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ಕಾರ್ಮಿಕರು ವಾಸವಿದ್ದ ಶೆಡ್‌ನೊಳಗೆ ನೀರಿನ ಟ್ಯಾಂಕರೊಂದು ನುಗ್ಗಿದ್ದು, ಅವಘಡದಲ್ಲಿ ಕಾರ್ಮಿಕ ಸಮೀರ್ ಸಿಂಗ್ (29) ಎಂಬುವರು ದುರ್ಮರಣಕ್ಕೀಡಾಗಿದ್ದಾರೆ.

ಪಶ್ಚಿಮ ಬಂಗಾಳದ ಸಮೀರ್, ಮೂರು ತಿಂಗಳ ಹಿಂದೆ ನಗರಕ್ಕೆ ಬಂದಿದ್ದರು. ದೊಡ್ಡಕನ್ನಲ್ಲಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದ್ದರು. ಸ್ನೇಹಿತರೆಲ್ಲರೂ ಒಟ್ಟಿಗೆ ಕಟ್ಟಡದ ಸಮೀಪ ಶೆಡ್‌ನಲ್ಲಿ ವಾಸವಿದ್ದರು.

‘ಶುಕ್ರವಾರ ಬೆಳಿಗ್ಗೆ ಸ್ನೇಹಿತರೆಲ್ಲರೂ ಕೆಲಸಕ್ಕೆ ಹೋಗಿದ್ದರು. ಸಮೀರ್ ಹಾಗೂ ಸ್ನೇಹಿತ ಸುಬೋಧ್ ಮಾತ್ರ ಶೆಡ್‌ನಲ್ಲಿ ಇದ್ದರು. ಅದೇ ಸಂದರ್ಭದಲ್ಲೇ ನೀರಿನ ಟ್ಯಾಂಕರ್‌ ಶೆಡ್‌ ಬಳಿ ಬಂದಿತ್ತು. ನಿರ್ಲಕ್ಷ್ಯದಿಂದ ಟ್ಯಾಂಕರ್ ಚಲಾಯಿಸಿದ್ದ ಚಾಲಕ, ಶೆಡ್‌ನೊಳಗೆ ನುಗ್ಗಿಸಿದ್ದ. ಈ ಸಂಬಂಧ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಸಮೀರ್ ಅವರ ತಲೆ ಮೇಲೆಯೇ ಟ್ಯಾಂಕರ್‌ ಹರಿದಿತ್ತು. ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟರು. ಕೂಗಾಟ ಕೇಳಿ ಸ್ನೇಹಿತರು ಸ್ಥಳಕ್ಕೆ ಬರುವಷ್ಟರಲ್ಲೇ ಆರೋಪಿ ಟ್ಯಾಂಕರ್ ಸಮೇತ ಪರಾರಿಯಾಗಿದ್ದಾನೆ.’

‘ಮೃತ ಸಮೀರ್ ಅವರ ಸ್ನೇಹಿತ ವಿಜಯ್ ಅವರಿಂದ ದೂರು ಪಡೆಯಲಾಗಿದೆ. ಟ್ಯಾಂಕರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.