ಬೆಂಗಳೂರು: ರಾಜ್ಯದ ಹಲವು ಶಾಲೆಗಳಲ್ಲಿ ಗಣಿತ, ವಿಜ್ಞಾನ ಹಾಗೂ ಆಂಗ್ಲ ಭಾಷೆಯ ಶಿಕ್ಷಕರ ಕೊರತೆ ಇದೆ. ಇದರಿಂದ ಗುಣಮಟ್ಟದ ಶಿಕ್ಷಣಕ್ಕೆ ಹಿನ್ನಡೆಯಾಗಿದೆ ಎಂದುಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಇಂಡಿಯನ್ ಅಕಾಡೆಮಿ ಸಮೂಹ ವಿದ್ಯಾಸಂಸ್ಥೆ ನವೀಕರಿಸಿದ ಬಿಬಿಎಂಪಿ ಹಾಗೂ ಐದು ಸರ್ಕಾರಿ ಶಾಲೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಖಾಲಿ ಇರುವ 15 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಪರೀಕ್ಷೆ ನಡೆಸಲಾಗಿತ್ತು. 12 ಸಾವಿರ ಶಿಕ್ಷಕರು ಲಭ್ಯರಾಗಲಿದ್ದಾರೆ. ಉಳಿದ ಮೂರು ಸಾವಿರ ಹುದ್ದೆ ಭರ್ತಿಗೆ 2023ರ ಫೆಬ್ರುವರಿಯಲ್ಲಿ ಸಿಇಟಿ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಜತೆಗೆ, ವಿಷಯವಾರು ತಜ್ಞ ಶಿಕ್ಷಕರ ಕೊರತೆ ನೀಗಿಸಲು ರಾಜ್ಯದ ಪ್ರತಿಷ್ಠಿತ ಕಾಲೇಜುಗಳ ವ್ಯವಸ್ಥಾಪಕರು ತಮ್ಮಲ್ಲಿರುವ ಅನುಭವಿ ಬೋಧಕರ ಸೇವೆಯನ್ನು ಸರ್ಕಾರಿ ಶಾಲಾ ಮಕ್ಕಳಿಗೆ ನೀಡಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆ ಸಲಹೆಗಾರರಾದ ಡಾ.ಎಂ.ಆರ್. ದೊರೆಸ್ವಾಮಿ, ’ರಾಜ್ಯದ 30 ಸಾವಿರ ಶಾಲೆಗಳಲ್ಲಿ ಸಮಸ್ಯೆಗಳಿದ್ದವು. ದತ್ತು ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಒಂದಷ್ಟು ಸಮಸ್ಯೆಗಳು ಬಗೆಹರಿದಿವೆ. ಈಗ ಸರ್ಕಾರ 8 ಸಾವಿರ ಕೊಠಡಿಗಳು, ಶೌಚಾಲಯಗಳ ನಿರ್ಮಾಣಕ್ಕೆ ಅನುದಾನ ನೀಡಿದೆ‘ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂಡಿಯನ್ ಅಕಾಡೆಮಿ ಸಮೂಹ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಡಾ.ಟಿ. ಸೋಮಶೇಖರ್, ಶಿಕ್ಷಣ ಇಲಾಖೆ ಆಯುಕ್ತ ರಾಮಪ್ರಸಾದ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.