ADVERTISEMENT

‘ಲಕ್ಷ ಅಪಾರ್ಟ್‌ಮೆಂಟ್‌ ಖಾಲಿ’

ನೀರಿನ ಕೊರತೆ: ವಸತಿ ಸಚಿವ ವಿ. ಸೋಮಣ್ಣ ಮಾಹಿತಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 19:38 IST
Last Updated 10 ಫೆಬ್ರುವರಿ 2020, 19:38 IST
ಕಾರ್ಯಕ್ರಮದಲ್ಲಿ ಗೋವಿಂದ ಕಾರಜೋಳ ಹಾಗೂ ಅಂಜುಂ ಪರ್ವೇಜ್ ಚರ್ಚೆಯಲ್ಲಿ ತೊಡಗಿರುವುದು. ಸಚಿವ ವಿ.ಸೋಮಣ್ಣ, ಆರ್.ಹರೀಶ್ ಆರಾಧ್ಯ ಹಾಗೂ ಸಿಡಬ್ಲ್ಯುಸಿಸಿಐ ಅಧ್ಯಕ್ಷೆ ಐಶ್ವರ್ಯಾ ನಂದ್ಯಪ್ಪ ಇದ್ದರು –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಗೋವಿಂದ ಕಾರಜೋಳ ಹಾಗೂ ಅಂಜುಂ ಪರ್ವೇಜ್ ಚರ್ಚೆಯಲ್ಲಿ ತೊಡಗಿರುವುದು. ಸಚಿವ ವಿ.ಸೋಮಣ್ಣ, ಆರ್.ಹರೀಶ್ ಆರಾಧ್ಯ ಹಾಗೂ ಸಿಡಬ್ಲ್ಯುಸಿಸಿಐ ಅಧ್ಯಕ್ಷೆ ಐಶ್ವರ್ಯಾ ನಂದ್ಯಪ್ಪ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಮರ್ಪಕ ನೀರಿನ ವ್ಯವಸ್ಥೆ ಇಲ್ಲದೆ ಇರುವುದರಿಂದ ನಗರದ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮನೆಗಳು ಖಾಲಿ ಇವೆ’ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಮಹಿಳಾ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಸಿಡಬ್ಲ್ಯುಸಿಸಿಐ) ರಾಷ್ಟ್ರೀಯ ಸುಸ್ಥಿರ ಜಲ ಮತ್ತು ನೈರ್ಮಲೀಕರಣ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಗರದಲ್ಲಿ ಶೇ 30ರಿಂದ ಶೇ 35ರಷ್ಟು ಜನ ಕೊಳವೆ ಬಾವಿ ನೀರನ್ನೇ ಅವಲಂಬಿಸಿದ್ದಾರೆ’ ಎಂದರು.

‘ಅಂತರ್ಜಲ ಸಂಪನ್ಮೂಲವನ್ನು ಶೇ 250ರಷ್ಟು ಪ್ರಮಾಣದಲ್ಲಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಅಂತರ್ಜಲವೂ ಕೂಡ ಕಲುಷಿತಗೊಂಡಿದೆ. ನೀರಿನ ಬಳಕೆ ವಿಷಯದಲ್ಲಿ ಹಳ್ಳಿಯ ಜನರನ್ನು ತಿದ್ದಬಹುದು. ಆದರೆ, ನಗರದ ಜನರಿಗೆ ಹೇಳುವುದು ಕಷ್ಟ’ ಎಂದರು.

ADVERTISEMENT

‘ರಾಜ್ಯದ 12 ಜಿಲ್ಲೆಗಳಿಗೆ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ ₹1,200 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ, ಈ ಹಣದ ಸರಿಯಾದ ಉದ್ದೇಶಕ್ಕೆ
ಬಳಕೆಯಾಗುತ್ತಿದೆಯೇ, ಇಲ್ಲವೇ ಎಂಬುದನ್ನು ಸಮರ್ಪಕವಾಗಿ ಪರಿಶೀಲಿಸುವ ಕೆಲಸವಾಗುತ್ತಿಲ್ಲ’ ಎಂದೂ ಹೇಳಿದರು.

ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್‌ , ‘ನೀರಾವರಿ, ಕೈಗಾರಿಕೆ, ಕುಡಿಯಲು ಹಾಗೂ ವಿದ್ಯುತ್‌ ಉತ್ಪಾದನೆಗೆ ನೀರು ಹಂಚಿಕೆಯಾಗುತ್ತದೆ. ರಾಜ್ಯದ ಸಣ್ಣ ನೀರಾವರಿಗೆ ಸದ್ಯ ಹೆಚ್ಚುವರಿಯಾಗಿ 100 ಟಿಎಂಸಿ ಅಡಿ ನೀರಿನ ಕೊರತೆ ಇದೆ’ ಎಂದು ಹೇಳಿದರು.

‘ಜಲವಿದ್ಯುತ್‌ ಬದಲು, ಪವನ ವಿದ್ಯುತ್‌ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡುವ ಅವಶ್ಯಕತೆ ಇದೆ’ ಎಂದರು.

‘ಲಭ್ಯವಿರುವ ಒಟ್ಟು ನೀರಿನಲ್ಲಿ ಶೇ 20ರಷ್ಟು ಮಾತ್ರ ಬಳಕೆಯಾದರೆ, ಉಳಿದ ಶೇ 80ರಷ್ಟು ವ್ಯರ್ಥವಾಗು
ತ್ತದೆ’ ಎಂದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ‘ಇಸ್ರೇಲ್‌ನಲ್ಲಿ ವರ್ಷಕ್ಕೆ ಕೇವಲ 59 ಮಿಲಿ ಮೀಟರ್‌ನಷ್ಟು ಮಳೆಯಾಗುತ್ತದೆ. ಆದರೂ, ಅಲ್ಲಿನವರಿಗೆ ನೀರಿನ ಕೊರತೆ ಬಾಧಿಸುವುದಿಲ್ಲ. ಇಷ್ಟೇ ನೀರಿನಲ್ಲಿ ತರಕಾರಿ ಬೆಳೆದು, ಬೇರೆ ದೇಶಗಳಿಗೂ ರಫ್ತು ಮಾಡುತ್ತಾರೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ 80 ಮಿಲಿಮೀಟರ್‌ನಷ್ಟು ಮಳೆ ಸುರಿದರೂ, ಬರ ಪರಿಸ್ಥಿತಿ ಇದೆ ಎನ್ನುತ್ತಾರೆ. ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸುವ ಕೆಲಸ ಆಗಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.