ADVERTISEMENT

ಕೃಂಬಿಗಲ್‌ ಭವನದ ಜಾಗದಲ್ಲಿ ಹೊಸ ಕಟ್ಟಡ

ಶಿಥಿಲಾವಸ್ಥೆಯಲ್ಲಿರುವ ಕಟ್ಟಡ l ತಿಂಗಳೊಳಗೆ ಶಂಕುಸ್ಥಾಪನೆ

ಭೀಮಣ್ಣ ಬಾಲಯ್ಯ
Published 3 ಜೂನ್ 2019, 20:40 IST
Last Updated 3 ಜೂನ್ 2019, 20:40 IST
ಐತಿಹಾಸಿಕ ಕೃಂಬಿಗಲ್ ಭವನ (ಎಡ ಚಿತ್ರ) ಕೆ.ನಂಜಪ್ಪ ಸ್ಮಾರಕ ವಸ್ತು ಸಂಗ್ರಹಾಲಯ ಕಟ್ಟಡ
ಐತಿಹಾಸಿಕ ಕೃಂಬಿಗಲ್ ಭವನ (ಎಡ ಚಿತ್ರ) ಕೆ.ನಂಜಪ್ಪ ಸ್ಮಾರಕ ವಸ್ತು ಸಂಗ್ರಹಾಲಯ ಕಟ್ಟಡ   

ಬೆಂಗಳೂರು: ಲಾಲ್‌ಬಾಗ್‌ ಸಸ್ಯೋದ್ಯಾನದಲ್ಲಿರುವ 160 ವರ್ಷಗಳಷ್ಟು ಹಳೆಯ ಪಾರಂಪರಿಕ ಕಟ್ಟಡ ‘ಜಿ.ಎಚ್‌.ಕೃಂಬಿಗಲ್‌ ಭವನ’ ಶಿಥಿಲಗೊಂಡಿದ್ದು, ಅದೇ ಜಾಗದಲ್ಲಿ ನೂತನಕಟ್ಟಡ ನಿರ್ಮಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.

ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಜವಾಬ್ದಾರಿಯನ್ನು ತೋಟಗಾರಿಕೆ ಇಲಾಖೆಯು ಪುರಾತತ್ವ ಇಲಾಖೆಯ ಹೆಗಲಿಗೆ ಹೊರಿಸಿದೆ. ಈ ಕಟ್ಟಡ ನಿರ್ಮಾಣಕ್ಕೆಂದೇ ಹಲವು ವರ್ಷಗಳ ಹಿಂದೆ ಬ್ಯಾಂಕಿನಲ್ಲಿ ಹಣ ಠೇವಣಿ ಇಡಲಾಗಿತ್ತು. ಆ ಹಣ ಬಳಸಿಕೊಂಡು ಕಟ್ಟಡ ನಿರ್ಮಿಸಲು ನಿರ್ಧರಿಸಲಾಗಿದೆ.

‘₹1 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲು ಯೋಜಿಸಲಾಗಿದೆ. ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ಇನ್ನೊಂದು ತಿಂಗಳ
ಒಳಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. 8 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ತೋಟಗಾರಿಕಾ ಅಧಿಕಾರಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ತರಬೇತಿ ನೀಡುವ ಉದ್ದೇಶದಿಂದ 1860ರಲ್ಲಿ ಸುಮಾರು 25x35 ಅಡಿ ವಿಸ್ತೀರ್ಣದ ಈ ಆಕರ್ಷಕ ಕಟ್ಟಡ ನಿರ್ಮಿಸಲಾಗಿತ್ತು.

ಜರ್ಮನ್ ಮೂಲದ ಸಸ್ಯ ವಿಜ್ಞಾನಿ ಗುಸ್ತಾವ್ ಹರ್ಮನ್ ಕೃಂಬಿಗಲ್‌ ಅವರು 1920–1932ರವರೆಗೆಲಾಲ್‌ಬಾಗ್ ಉಸ್ತುವಾರಿ ಅಧಿಕಾರಿಯಾಗಿದ್ದರು. ಉದ್ಯಾನವನ್ನು ಬಲು ಜತನದಿಂದ ಹಾಗೂ ವ್ಯವಸ್ಥಿತವಾಗಿ ಬೆಳೆಸಿದ್ದರು. ತೋಟಗಾರಿಕೆ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಯ ಸ್ಮರಣಾರ್ಥ ಈ ಕಟ್ಟಡಕ್ಕೆ ಅವರ ಹೆಸರಿಡಲಾಗಿತ್ತು.

ಸದ್ಯದ ಸ್ಥಿತಿ: 2017ರಲ್ಲಿ ಮಳೆಗೆ ಈಹಾಲ್‌ನ ಹಿಂಭಾಗ ಸಂಪೂರ್ಣ ಬಿದ್ದು ಹೋಗಿತ್ತು. ಸದ್ಯ ಕಟ್ಟಡ ಮುಕ್ಕಾಲು ಭಾಗ ಶಿಥಿಲಗೊಂಡಿದೆ.

‘ಈ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ’ ಎಂಬ ಫಲಕವನ್ನು ಅದಕ್ಕೆ ನೇತುಹಾಕಲಾಗಿದೆ.

ವಸ್ತು ಸಂಗ್ರಹಾಲಯ ಜೀರ್ಣೋದ್ಧಾರಕ್ಕೆ ಹಣವಿಲ್ಲ

ಕೆ.ನಂಜಪ್ಪ ವಸ್ತುಸಂಗ್ರಹಾಲಯ ಉದ್ಯಾನದಲ್ಲಿರುವ ಮತ್ತೊಂದು ಪುರಾತನ ಕಟ್ಟಡ. ಈ ಕಟ್ಟಡವೂ ಕುಸಿದು ಹೋಗಿದೆ. ಆದರೆ, ಇದರ ಜೀರ್ಣೋದ್ಧಾರಕ್ಕೆ ಅನುದಾನದ ಕೊರತೆ ಎದುರಾಗಿದೆ.

ಇದೇ ಕಟ್ಟಡದಲ್ಲಿರುವಮತ್ಸ್ಯಾಲಯದ ಅಭಿವೃದ್ಧಿಗೆಇನ್ಫೊಸಿಸ್‌ ಪ್ರತಿಷ್ಠಾನ ಅನುದಾನ ನೀಡುವುದಾಗಿ ಭರವಸೆ ನೀಡಿತ್ತು. ಅದು ಇನ್ನೂ ಈಡೇರಿಲ್ಲ.

‘ಕೆ.ನಂಜಪ್ಪ ಸ್ಮಾರಕ ವಸ್ತು ಸಂಗ್ರಹಾಲಯದ ಕಟ್ಟಡದ ನಿರ್ಮಾಣಕ್ಕೆ ಅನುದಾನದ ಕೊರತೆ ಎದುರಾಗಿದೆ. ಇದರೊಳಗಿನ ಮತ್ಸ್ಯಾಲಯದ ಅಭಿವೃದ್ಧಿಗೆಇನ್ಫೊಸಿಸ್‌ ಪ್ರತಿಷ್ಠಾನ ಹಣ ನೀಡುವುದಾಗಿ ತಿಳಿಸಿದೆ. ಕಟ್ಟಡ ಕಟ್ಟಿದರೆ ಮಾತ್ರಮತ್ಸ್ಯಾಲಯ ಅಭಿವೃದ್ಧಿ ಸಾಧ್ಯ’ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.