‘ಗದ್ದೆಯಲ್ಲಿ ನಡೆದ ಅನುಭವ’
ಲಾಲ್ಬಾಗ್ ಸಮಸ್ಯೆಗೆ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಿರುವ ‘ಪ್ರಜಾವಾಣಿ’ಗೆ ಅಭಿನಂದನೆಗಳು. ವೈದ್ಯರ ಸಲಹೆಯಂತೆ ಹಿರಿಯ ನಾಗರಿಕರು ಮಣ್ಣಿನ ಮೇಲೆ ನಡೆದಾಡುವುದು ಸೂಕ್ತವೆಂದು ತಿಳಿದಿದ್ದಾರೆ. ಆದರೆ, ಮಣ್ಣಿನ ಮೇಲೆ ಅಲ್ಲಲ್ಲಿ ನೀರು ನಿಂತು ಮಣ್ಣಿನ ರಸ್ತೆಗಳು ಗದ್ದೆಯಂತೆ ಆಗಿರುವುದು ವಾಯುವಿಹಾರಿಗಳಿಗೆ ತೊಂದರೆಯಾಗುತ್ತಿದೆ. ಜೀವ ಬಿಗಿ ಹಿಡಿದು ನಡೆಯುವ ಪರಿಸ್ಥಿತಿ ಇದೆ. ಲಾಲ್ಬಾಗ್ನಲ್ಲಿರುವ ಸಮಸ್ಯೆಗಳನ್ನು ಸರ್ಕಾರ ಪರಿಹರಿಸಬೇಕು.
ಎಂ. ಲಕ್ಷ್ಮಿನಾರಾಯಣ, ಬಡವರ ಬಳಗ ಗಾಂಧಿ ಆಶ್ರಮ ಅಧ್ಯಕ್ಷ
***
‘ಕ್ರೇನ್ಗಳ ನಿಲುಗಡೆ ತಾಣ’
ಸುಮಾರು 30 ವರ್ಷಗಳಿಂದ ಲಾಲ್ಬಾಗ್ಗೆ ಹೋಗಿ ಬರುತ್ತಿದ್ದೇನೆ. ಮೊದಲು ನೋಡಿದ ಲಾಲ್ಬಾಗ್ಗೂ ಈಗಿನ ಉದ್ಯಾನಕ್ಕೂ ವ್ಯತ್ಯಾಸವಿದೆ. ಪೂರ್ವದ ತುದಿಯಲ್ಲಿ ದೊಡ್ಡ ದೊಡ್ಡ ಕ್ರೇನ್ಗಳನ್ನು ನಿಲ್ಲಿಸಲಾಗುತ್ತಿದೆ. ಎರಡು ತಿಂಗಳಿಂದ ಅಲ್ಲೇ ನಿಂತಿವೆ. ತೋಟಗಾರಿಕೆ ಅಧಿಕಾರಿಗಳು ನೋಡಿಯೂ ಸುಮ್ಮನಿದ್ದಾರೆ. ಈ ರೀತಿಯ ವಾಹನಗಳ ನಿಲುಗಡೆಗೆ ಅವಕಾಶ ನೀಡಿದರೆ ಜನ ಏನು ಮಾಡಬೇಕು?
ಪುರುಷೋತ್ತಮ ಜಿ.ಸಿ., ಬನಶಂಕರಿ
***
‘ಜನಸ್ಪಂದನಕ್ಕೆ ಕಾಲ ಮಿಂಚಿಲ್ಲ’
ಬೆಂಗಳೂರು ಎಂದರೆ ಲಾಲ್ಬಾಗ್, ಲಾಲ್ಬಾಗ್ ಎಂದರೆ ಬೆಂಗಳೂರು ಎಂಬುದು ಪ್ರತೀತಿ. ನಾನು ಚಿಕ್ಕವನಾಗಿದ್ದಾಗ ಲಾಲ್ಬಾಗ್ಗೆ ಹೋಗಿ ಬಂದರೆ ಸ್ವರ್ಗಕ್ಕೆ ಹೋದಷ್ಟು ಸಂತೋಷವಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ನಿರ್ವಹಣೆ ಮಾಡದೆ ಇರುವುದು ಬೇಸರದ ಸಂಗತಿ. ಜನಸ್ಪಂದನ ನಡೆಸಿ ಸಮಸ್ಯೆಗಳ ಕುರಿತು ಜನರಿಗೆ ಪರಿಹಾರ ಒದಗಿಸಬಹುದು ಎಂಬ ಪ್ರಜಾವಾಣಿಯ ಮನವಿಗೆ ತೋಟಗಾರಿಕೆ ಸಚಿವ ಮುನಿರತ್ನ ಅವರು ಸಮ್ಮತಿ ನೀಡದಿರುವುದು ವಿಷಾದದ ಸಂಗತಿ. ರಾಜಕಾರಣಿಗಳಾದವರಿಗೆ ತಮ್ಮ ಕ್ಷೇತ್ರದ ಬಗ್ಗೆ ವಿವರವಾಗಿ ತಿಳಿದಿರುವುದಿಲ್ಲ. ಜನಸ್ಪಂದನ ಕಾರ್ಯಕ್ರಮ ನಡೆಸಿದ್ದರೆ ಸಮಸ್ಯೆಗಳು ಅರ್ಥವಾಗುತ್ತಿತ್ತು. ಇನ್ನೂ ಕಾಲ ಮಿಂಚಿಲ್ಲ.
ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.