
ಬೆಂಗಳೂರು: ಗೋಮಾಳ ಜಮೀನು ಕಬಳಿಸಿ ಮನೆ ಕಟ್ಟಿದ ಆರೋಪ ಸಾಬೀತಾದ ಕಾರಣ ಮೈಲನಹಳ್ಳಿ ಗ್ರಾಮದ ನಿವಾಸಿ ಚೌಡಪ್ಪ ಅವರಿಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಒಂದು ವರ್ಷ ಸಾದಾ ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಜಾಲಹಳ್ಳಿ ಹೋಬಳಿಯ ಮೈಲನಹಳ್ಳಿ ಗ್ರಾಮದ ಸರ್ವೆ ನಂ. 20ರ ಗೋಮಾಳ ಜಮೀನಿನಲ್ಲಿ 107X56 ಅಡಿ ಜಾಗವನ್ನು ಚೌಡಪ್ಪ ಅವರು ಒತ್ತುವರಿ ಮಾಡಿ, ಮನೆ ನಿರ್ಮಿಸಿದ್ದರು. ಈ ಸಂಬಂಧ ತಹಶೀಲ್ದಾರ್ ಅವರು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ಸಾಕ್ಷ್ಯಗಳ ವಿಚಾರಣೆ ನಡೆಸಿದ ನ್ಯಾಯಾಲಯ, ಭೂ ಕಬಳಿಕೆ ಮಾಡಿರುವುದು ಸಾಬೀತಾದ ಕಾರಣ ಜೈಲು ಶಿಕ್ಷೆ ಹಾಗೂ ಐದು ಸಾವಿರ ರೂಪಾಯಿ ದಂಡ ವಿಧಿಸಿದೆ. ದಂಡ ಪಾವತಿಸಲು ತಪ್ಪಿದ್ದಲ್ಲಿ ಮೂರು ತಿಂಗಳ ಸಾದಾ ಶಿಕ್ಷೆ ವಿಧಿಸಿ 2ನೇ ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯರಾದ ಪಾಟೀಲ ನಾಗಲಿಂಗನಗೌಡ, ಕಂದಾಯ ಸದಸ್ಯ ಕೆ.ಎಚ್.ಅಶ್ವತ್ಥ ನಾರಾಯಣಗೌಡ ಅವರಿದ್ದ ಪೀಠ ತೀರ್ಪು ನೀಡಿದೆ.
ಒತ್ತುವರಿಯಾಗಿದ್ದ ಆಶ್ರಯ ಯೋಜನೆಗಾಗಿ ಕಾಯ್ದಿರಿಸಿದ ಗೋಮಾಳ ಜಮೀನನ್ನು ಕೂಡಲೇ ತೆರವುಗೊಳಿಸಿ, ವರದಿ ಸಲ್ಲಿಸುವಂತೆ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.