ADVERTISEMENT

ಸ್ನೇಹಿತನ ಕೊಲೆ: ಜೀವಾವಧಿ ಶಿಕ್ಷೆ ಕಾಯಂ

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 21:16 IST
Last Updated 3 ಜನವರಿ 2023, 21:16 IST
   

ಬೆಂಗಳೂರು: ಹಣಕ್ಕಾಗಿ ಸ್ನೇಹಿತನನ್ನು ಅಪಹರಿಸಿ ಕೊಲೆಗೈದ ಪ್ರಕರಣವೊಂದರಲ್ಲಿ ಮುಂಬೈನ ಇಬ್ಬರು ಯುವತಿಯರೂ ಸೇರಿದಂತೆ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಸೆಷನ್ಸ್‌ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

‘ಸೆಷನ್ಸ್‌ ನ್ಯಾಯಾಲಯದ ಆದೇಶ ರದ್ದುಗೊಳಿಸಬೇಕು‘ ಎಂದು ಕೋರಿ ಅಪರಾಧಿಗಳಾದ ಜಾರ್ಖಂಡ್‌ನ ರೋಹಿತ್ ಕುಮಾರ್, ಮುಂಬೈನ ಶಿವಾನಿ ಠಾಕೂರ್, ಪ್ರೀತಿ ರಾಜ್ ಮತ್ತು ಬಿಹಾರದ ವಾರೀಶ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.

‘ಸಾಕ್ಷ್ಯಾಧಾರಗಳನ್ನು ಮರು ಪರಿಶೀಲಿಸಿದರೆ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡುವ ಅಗತ್ಯ ಕಂಡುಬರುತ್ತಿಲ್ಲ‘ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಪೀಠ, ನಾಲ್ವರು ಮೇಲ್ಮನವಿದಾರರಿಗೆ 2014ರ ನವೆಂಬರ್ 6ರಂದು ಶಿಕ್ಷೆ ವಿಧಿಸಿದ ಸೆಷನ್ಸ್‌ ನ್ಯಯಾಲಯದ ಆದೇಶವನ್ನು ಎತ್ತಿಹಿಡಿದಿದೆ.

ADVERTISEMENT

ಪ್ರಕರಣವೇನು?: ರಾಜಸ್ಥಾನದ ತುಷಾರ್ ನಗರದಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. 2011ರ ಜನವರಿ 14ರಂದು ಕಾಣೆಯಾಗಿದ್ದರು. ಏಳು ದಿನಗಳ ನಂತರ ಅವರ ಮೃತದೇಹ ವೀರಸಾಗರ ರಸ್ತೆಯ ನೀಲಗಿರಿ ತೋಪಿನಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

‘ವಾರಿಶ್‌ ಮತ್ತು ತುಷಾರ್ ರಾಜಸ್ಥಾನದಲ್ಲಿ ಒಟ್ಟಿಗೇ ವ್ಯಾಸಂಗ ಮಾಡಿದ್ದರು. ಶ್ರೀಮಂತ ಕುಟುಂಬದ ಹಿನ್ನೆಲೆ ಹೊಂದಿದ್ದ ತುಷಾರ್‌ ಅವರನ್ನು ಅಪಹರಿಸಿ ಹಣ ವಸೂಲಿ ಮಾಡುವ ಉದ್ದೇಶದಿಂದ ವಾರಿಶ್‌ ಸಂಚು ರೂ‍ಪಿಸಿದ್ದ. ಇದರ ಅನುಸಾರ ಆತನ ಸ್ನೇಹಿತರು ತುಷಾರ್ ಅವರನ್ನು ಜನವರಿ 14ರಂದು ಉಪಾಯದಿಂದ ಅಪಹರಿಸಿದ್ದರು. ನಂತರ ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡಿದ್ದಾರೆ’ ಎಂದು ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.