
ಕೃತಕ ಅಂಗಾಂಗ ವಿತರಣಾ ಶಿಬಿರ
ಬೆಂಗಳೂರು: ಬೆಂಗಳೂರು ರೌಂಡ್ ಟೇಬಲ್ 7 ಸಂಸ್ಥೆ ಹಮ್ಮಿಕೊಂಡಿರುವ ಕೃತಕ ಕಾಲು ಮತ್ತು ಕೈ ಅಳವಡಿಕೆಯ ಕಾರ್ಯಕ್ರಮಕ್ಕೆ ನಗರದಲ್ಲಿ ಶನಿವಾರ ಚಾಲನೆ ದೊರೆಯಿತು.
ಬೆಂಗಳೂರು ಲೇಡೀಸ್ ಸರ್ಕಲ್ 19 ಮತ್ತು ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಷನ್ (ಕೆಎಂವೈಎಫ್) ಸಹಯೋಗದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ, ಸಂಸ್ಥೆಯು ಈ ವರ್ಷ ₹ 30 ಲಕ್ಷ ಹಣವನ್ನು ದಾನಿಗಳಿಂದ ಸಂಗ್ರಹಿಸಿದೆ. ಈ ಹಣದಲ್ಲಿ ಮಿಲ್ಲರ್ಸ್ ರಸ್ತೆಯಲ್ಲಿರುವ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಕೃತಕ ಕಾಲು ಮತ್ತು ಕೈ ಅಳವಡಿಸಲಾಗುತ್ತಿದ್ದು, ಈ ವರ್ಷ ಸಾವಿರ ಕೃತಕ ಅಂಗಗಳು ಮತ್ತು ನೂರು ಕೈಗಳನ್ನು ಉಚಿತವಾಗಿ ಒದಗಿಸುವುದಾಗಿ ಘೋಷಿಸಿದೆ.
ಬೆಂಗಳೂರು ರೌಂಡ್ ಟೇಬಲ್ 7ರ ಅಧ್ಯಕ್ಷ ಅಭಿಷೇಕ್ ಅಹುಜಾ, ‘ದಶಕಗಳಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದು, 47 ವರ್ಷಗಳಲ್ಲಿ ಆರು ಸಾವಿರ ಕೃತಕ ಅಂಗಾಂಗಗಳನ್ನು ಅಳವಡಿಸಲಾಗಿದೆ. ಪ್ರತಿಯೊಂದು ಕೃತಕ ಕೈಗಳನ್ನು ₹5 ಸಾವಿರ ವೆಚ್ಚದಲ್ಲಿ ತಯಾರಿಸಲಾಗುತ್ತದೆ. ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯು ಅರ್ಹರಿಗೆ ಕೃತಕ ಅಂಗಗಳನ್ನು ಅಳವಡಿಸುತ್ತದೆ’ ಎಂದು ಹೇಳಿದರು.
ಬೆಂಗಳೂರು ಲೇಡೀಸ್ ಸರ್ಕಲ್ 19ರ ಅಧ್ಯಕ್ಷೆ ನತಾಶಾ ಅಹುಜಾ, ‘ಕೃತಕ ತೋಳುಗಳನ್ನು ನೀಡುವುದರಿಂದ ಬದುಕಿನಲ್ಲಿ ಹೊಸ ಭರವಸೆ ಮೂಡಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.