ADVERTISEMENT

ಬಡಾವಣೆಗಳಲ್ಲಿ ಕಡಿಮೆ ಬೆಲೆಗೆ ತರಕಾರಿ

ಬಾಲಾಜಿನಗರ ನಾಗರಿಕರ ಹಿತರಕ್ಷಣಾ ವೇದಿಕೆ ನೇತೃತ್ವ

​ಪ್ರಜಾವಾಣಿ ವಾರ್ತೆ
Published 1 ಮೇ 2020, 22:15 IST
Last Updated 1 ಮೇ 2020, 22:15 IST
ಬಾಲಾಜಿನಗರ ನಾಗರಿಕರ ಹಿತರಕ್ಷಣಾ ವೇದಿಕೆ ವತಿಯಿಂದ ಅನ್ನಪೂಣೇಶ್ವರಿನಗರ ನಿವಾಸಿಗಳಿಗೆ ತರಕಾರಿಗಳನ್ನು ಶುಕ್ರವಾರ ಮಾರಾಟ ಮಾಡಲಾಯಿತು
ಬಾಲಾಜಿನಗರ ನಾಗರಿಕರ ಹಿತರಕ್ಷಣಾ ವೇದಿಕೆ ವತಿಯಿಂದ ಅನ್ನಪೂಣೇಶ್ವರಿನಗರ ನಿವಾಸಿಗಳಿಗೆ ತರಕಾರಿಗಳನ್ನು ಶುಕ್ರವಾರ ಮಾರಾಟ ಮಾಡಲಾಯಿತು   

ಬೆಂಗಳೂರು: ಲಾಕ್‍ಡೌನ್‍ನಿಂದ ನಷ್ಟಕ್ಕೆ ಸಿಲುಕಿರುವ ರೈತರಿಂದ ಹಣ್ಣು, ತರಕಾರಿಗಳನ್ನು ಬಾಲಾಜಿನಗರ ನಾಗರಿಕರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ನೇರವಾಗಿ ಖರೀದಿಸಿ ರಾಜರಾಜೇಶ್ವರಿನಗರದ ಸುತ್ತಮುತ್ತಲಿನ ಬಡಾವಣೆ ಜನರಿಗೆ ಕಡಿಮೆ ಬೆಲೆಯಲ್ಲಿ ಪೂರೈಸಲಾಗುತ್ತಿದೆ.

ಲಾಕ್‍ಡೌನ್‍ನಿಂದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಬೆಲೆ ಸಿಗದ ಕಾರಣ, ಬೆಳೆ ನಾಶ ಮಾಡಲು ರೈತರು ಮುಂದಾಗಿದ್ದರು. ಇದನ್ನು ಮನಗಂಡ ವೇದಿಕೆ 15 ದಿನಗಳಿಂದ ಜನರ ಬೇಡಿಕೆಗಳಿಗೆ ಅನುಗುಣವಾಗಿ ರೈತರಿಂದ ತಾಜಾ ಹಣ್ಣು, ತರಕಾರಿಗಳನ್ನು ಸರಬರಾಜು ಮಾಡುತ್ತಿದೆ.

ನಿತ್ಯ ಕ್ಯಾರೆಟ್, ಬೀಟ್‍ರೂಟ್, ಮೂಲಂಗಿ, ತೊಂಡೆಕಾಯಿ, ಕುಂಬಳಕಾಯಿ, ಬದನೆ, ಕ್ಯಾಪ್ಸಿಕಂ ಸೇರಿ ಎಲ್ಲ ಬಗೆಯ ತರಕಾರಿಗಳು ಹಾಗೂ ಬಾಳೆಹಣ್ಣು, ಪೇರಲೆ, ಪಪ್ಪಾಯ, ದ್ರಾಕ್ಷಿಗಳನ್ನು ತಾಜಾ ಸ್ಥಿತಿಯಲ್ಲಿ ಪೂರೈಸುತ್ತಿದೆ. ನಿತ್ಯ ಒಂದೊಂದು ಬಡಾವಣೆಯಲ್ಲಿ ವೇದಿಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುತ್ತಿದ್ದು, ಎಲ್ಲ ತರಕಾರಿಗಳನ್ನು ಪ್ರತಿ ಕೆ.ಜಿ.ಗೆ ಕನಿಷ್ಠ ₹20ರಂತೆ ಮಾರಾಟ ಮಾಡಲಾಗುತ್ತಿದೆ.

ADVERTISEMENT

'ನೆಲಮಂಗಲ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗಗಳಲ್ಲಿ ರೈತರು ಬೆಳೆದ ತರಕಾರಿಗಳನ್ನು ನೇರವಾಗಿ ಗ್ರಾಹಕರ ಕೈಸೇರುವಂತೆ ವ್ಯವಸ್ಥೆ ಮಾಡಿದ್ದೇವೆ. ನಿತ್ಯ ಕನಿಷ್ಠ 600 ಕೆ.ಜಿ.ಯಷ್ಟು ತರಕಾರಿಗಳು ಮಾರಾಟವಾಗುತ್ತಿವೆ. ಬೆಲೆ ಇಲ್ಲದ ಕಾರಣ ರೈತರು ಕಂಗಾಲಾಗಿದ್ದರು. ಲಾಕ್‍ಡೌನ್‍ನಿಂದ ಗ್ರಾಹಕರಿಗೂ ತರಕಾರಿ, ಹಣ್ಣಿನ ಸಮಸ್ಯೆಯಿತ್ತು. ಇಬ್ಬರಿಗೂ ಅನುಕೂಲವಾಗುವಂತೆ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ' ಎಂದು ಬಾಲಾಜಿ ನಗರ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಚಂದ್ರಮೌಳಿ ತಿಳಿಸಿದರು.

‘ವೇದಿಕೆ ವತಿಯಿಂದ ಬಾಲಾಜಿ ಬಡಾವಣೆಗಳಲ್ಲಿರುವ ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಉಚಿತವಾಗಿ ದಿನಸಿ ವಿತರಿಸಲಾಗುತ್ತಿದೆ. ತರಕಾರಿ ಹಣ್ಣು ಪೂರೈಸುವ ಸಾರಿಗೆ ವ್ಯವಸ್ಥೆಗೆ ಹಾಪ್‍ಕಾಮ್ಸ್ ಹಾಗೂ ತೋಟಗಾರಿಕೆ ಇಲಾಖೆ ನೆರವಾದವು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.