ADVERTISEMENT

ಅತ್ತಿಬೆಲೆ ಸಾರಿಗೆ ತನಿಖಾ ಠಾಣೆ ಮೇಲೂ ಲೋಕಾಯುಕ್ತ ಪೊಲೀಸ್‌ ದಾಳಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 6:56 IST
Last Updated 30 ಸೆಪ್ಟೆಂಬರ್ 2022, 6:56 IST
   

ಬೆಂಗಳೂರು: ಆನೇಕಲ್‌ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಕರ್ನಾಟಕ- ತಮಿಳುನಾಡು ಅಂತರರಾಜ್ಯ ಗಡಿಯಲ್ಲಿರುವ ಸಾರಿಗೆ ಇಲಾಖೆ ತನಿಖಾ ಠಾಣೆ ಮೇಲೆ ಲೋಕಾಯುಕ್ತ ಪೊಲೀಸರು ಶುಕ್ರವಾರ ದಾಳಿಮಾಡಿದ್ದು, ಶೋಧ ನಡೆಸುತ್ತಿದ್ದಾರೆ.

ಅಂತರರಾಜ್ಯ ಗಡಿಗಳಲ್ಲಿ ಸಾಗುವ ವಾಹನಗಳ ಮಾಲೀಕರು, ಚಾಲಕರಿಂದ ಹಣ ವಸೂಲಿ ಮಾಡುತ್ತಿರುವ ಆರೋಪದ ಮೇಲೆ ರಾಜ್ಯದ 15 ತನಿಖಾ ಠಾಣೆಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿಮಾಡಿ, ಶೋಧ ನಡೆಸುತ್ತಿದ್ದಾರೆ. ಶುಕ್ರವಾರ ನಸುಕಿನಲ್ಲೇ ಅತ್ತಿಬೆಲೆ ತನಿಖಾ ಠಾಣೆ ಮೇಲೆ ದಾಳಿ ಮಾಡಲಾಗಿದೆ.

ತನಿಖಾ ಠಾಣೆಯಲ್ಲಿ ನಗದು ಲಭ್ಯವಾಗಿದ್ದು, ವಾಹನಗಳ ಅಂತರರಾಜ್ಯ ಪ್ರವೇಶಕ್ಕೆ ವಿಧಿಸಿರುವ ಶುಲ್ಕ ಮತ್ತು ಲಭ್ಯವಿರುವ ನಗದು ನಡುವಿನ ವ್ಯತ್ಯಾಸದ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ತನಿಖಾ ಠಾಣೆಯಲ್ಲಿದ್ದ ಸಾರಿಗೆ ಅಧಿಕಾರಿಗಳು, ಇಲಾಖೆಯ ಸಿಬ್ಬಂದಿ ಮತ್ತು ಹೊರಗುತ್ತಿಗೆ ಸಿಬ್ಬಂದಿಯನ್ನು ವಶಕ್ಕೆ ಪಡೆದು ಪ್ರಶ್ನಿಸಲಾಗುತ್ತಿದೆ ಎಂದು ಲೋಕಾಯುಕ್ತದ ಉನ್ನತ ಮೂಲಗಳು ʼಪ್ರಜಾವಾಣಿʼಗೆ ತಿಳಿಸಿವೆ.

ADVERTISEMENT

ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ಚಾಮರಾಜನಗರ, ಬೆಳಗಾವಿ, ಕಲಬುರಗಿ, ಬೀದರ್‌ ಸೇರಿದಂತೆ ಹಲವು ಜಿಲ್ಲೆಗಳಲ್ಲಿರುವ ಅಂತರರಾಜ್ಯ ತನಿಖಾ ಠಾಣೆಗಳಲ್ಲಿ ಶೋಧ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.