ADVERTISEMENT

ಯಂತ್ರ ಮೈ ಮೇಲೆ ಬಿದ್ದು ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 16:43 IST
Last Updated 19 ಅಕ್ಟೋಬರ್ 2021, 16:43 IST

ಬೆಂಗಳೂರು: ಗಂಗಮ್ಮನಗುಡಿ ಠಾಣೆ ವ್ಯಾಪ್ತಿಯ 'ಎಂ.ಕೆ. ಎಂಜಿನಿಯರ್ಸ್' ಕಾರ್ಖಾನೆಯಲ್ಲಿ ಯಂತ್ರದ ಭಾಗ ಮೈ ಮೇಲೆ ಬಿದ್ದು ನಾಗರಾಜು (40) ಎಂಬುವರು ಮೃತಪಟ್ಟಿದ್ದಾರೆ.

‘ನಾಗಸಂದ್ರದ ಮಂಜುನಾಥನಗರ ನಿವಾಸಿ ನಾಗರಾಜು, ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅ. 15ರಂದು ಕಾರ್ಖಾನೆಯಲ್ಲಿ ಯಂತ್ರ ಸಾಗಿಸುವಾಗ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.

‘ತಮಿಳುನಾಡಿಗೆ ಹೋಗಿದ್ದ ನಾಗರಾಜು, ಲಾರಿಯಲ್ಲಿ ದೊಡ್ಡ ಗಾತ್ರದ ಯಂತ್ರ ಇಟ್ಟುಕೊಂಡು ನಗರಕ್ಕೆ ಬಂದಿದ್ದರು. ಕಮ್ಮಗೊಂಡನಹಳ್ಳಿಯಲ್ಲಿರುವ 'ಎಂ.ಕೆ. ಎಂಜಿನಿಯರ್ಸ್' ಕಾರ್ಖಾನೆ ಬಳಿ ಲಾರಿ ನಿಲ್ಲಿಸಿ, ಅದರಲ್ಲಿದ್ದ ಯಂತ್ರವನ್ನು ಕಾರ್ಖಾನೆಯೊಳಗೆ ಸಾಗಿಸಲಾಗುತ್ತಿತ್ತು.’

ADVERTISEMENT

‘ಸಾಗಣೆ ವೇಳೆಯೇ ಯಂತ್ರದ ಭಾಗವೊಂದು ಕಳಚಿ ನಾಗರಾಜು ತಲೆ ಮೇಲೆ ಬಿದ್ದಿತ್ತು. ತೀವ್ರ ಗಾಯಗೊಂಡ ಅವರು ಸ್ಥಳದಲ್ಲಿ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರು. ಅವರನ್ನು ಸಪ್ತಗಿರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆಗ ಸ್ಪಂದಿಸದೇ ತೀರಿಕೊಂಡಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.

‘ಕಾರ್ಖಾನೆ ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ನಾಗರಾಜು ಸಾವಿಗೆ ಕಾರ್ಖಾನೆಯವರೇ ಕಾರಣವೆಂದು ಅವರ ಪತ್ನಿ ದೂರು ನೀಡಿದ್ದಾರೆ. ಅದನ್ನು ಆಧರಿಸಿ ಕಾರ್ಖಾನೆ ಮಾಲೀಕ ಮುತ್ತುರಾಜ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ವಿಚಾರಣೆ ನಡೆಸಬೇಕಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.