ADVERTISEMENT

ಬೆಂಗಳೂರು ನಗರದ ವ್ಯಕ್ತಿಗೆ ಶ್ವಾಸಕೋಶದ ಕಸಿ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 19 ಮೇ 2023, 20:17 IST
Last Updated 19 ಮೇ 2023, 20:17 IST
   

ಬೆಂಗಳೂರು: ನಗರದ 61 ವರ್ಷದ ವ್ಯಕ್ತಿಯೊಬ್ಬರಿಗೆ ಚೆನ್ನೈನ ‘ಎಂಜಿಎಂ ಹೆಲ್ತ್‌ಕೇರ್‌’ನಲ್ಲಿ ಯಶಸ್ವಿಯಾಗಿ ಶ್ವಾಸಕೋಶದ ಕಸಿ ಕೈಗೊಳ್ಳಲಾಗಿದೆ.

ಡಾ.ಕೆ.ಆರ್‌. ಬಾಲಕೃಷ್ಣನ್‌, ಡಾ.ಕೆ.ಜಿ. ಸುರೇಶ್‌ರಾವ್‌ ಮತ್ತು ಡಾ. ಅಪರ್‌ ಜಿಂದಾಲ್‌ ಅವರನ್ನೊಳಗೊಂಡ ತಜ್ಞರ ತಂಡ ಈ ಶಸ್ತ್ರಚಿಕಿತ್ಸೆ ಕೈಗೊಂಡಿದೆ.

‘ಶ್ವಾಸಕೋಶದ ಕಸಿ ಸಂಕೀರ್ಣ ಮತ್ತು ಸವಾಲಿನ ಪ್ರಕ್ರಿಯೆಯಾಗಿದೆ. ದೇಹಕ್ಕೆ ಆಮ್ಲಜನಕ ಪೂರೈಸುವಲ್ಲಿ ಶ್ವಾಸಕೋಶ ಪ್ರಮುಖ ಅಂಗ. ಶ್ವಾಸಕೋಶಕ್ಕೆ ಹಾನಿಯಾದ ಸಂದರ್ಭದಲ್ಲಿ ಚಿಕಿತ್ಸೆ ಮತ್ತು ಇತರೆ ವಿಧಾನಗಳು ವಿಫಲವಾದ ಸಂದರ್ಭದಲ್ಲಿ ಕಸಿ ಮಾಡುವುದು ಅನಿವಾರ್ಯವಾಗುತ್ತದೆ’ ಎಂದು ತಜ್ಞ ವೈದ್ಯ ಡಾ. ಅಪರ್‌ ಜಿಂದಾಲ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ADVERTISEMENT

’ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧರಾಗಿರುವವರಿಗೆ ಮಾತ್ರ ಈ ಕಸಿ ಮಾಡಲು ಸಾಧ್ಯ. ಶಸ್ತ್ರಚಿಕಿತ್ಸೆ ನಂತರ 15 ರಿಂದ 21 ದಿನಗಳವರೆಗೆ ಆಸ್ಪತ್ರೆಯಲ್ಲಿ ವೈದ್ಯರ ನಿಗಾದಲ್ಲಿ ಇರಬೇಕಾಗುತ್ತದೆ. ಇದು ಆಯಾ ವ್ಯಕ್ತಿಯ ಮೇಲೆ ಅವಲಂಬನೆಯಾಗಿರುತ್ತದೆ’ ಎಂದು ತಿಳಿಸಿದರು

ಎಂಜಿಎಂ ಹೆಲ್ತ್‌ಕೇರ್‌ನ ಸಹ ನಿರ್ದೇಶಕ ಡಾ. ಸುರೇಶ್‌ ರಾವ್‌ ಮಾತನಾಡಿ, ‘1993ರಲ್ಲಿ ದೇಶದಲ್ಲಿ ಮೊದಲ ಬಾರಿ ಕಸಿ ನಡೆದಿತ್ತು. ಅಂಗಾಂಗ ದಾನಗಳ ಬಗ್ಗೆ ಈಗ ಜನರಲ್ಲೂ ಸಾಕಷ್ಟು ಅರಿವು ಮೂಡುತ್ತಿದೆ. ಆದರೂ, ದಾನಿಗಳು ಲಭ್ಯವಾಗದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಕಸಿ ಮಾಡುವ ಶಸ್ತ್ರಚಿಕಿತ್ಸೆಗಳು ನಡೆಯುತ್ತಿಲ್ಲ’ ಎಂದರು.

‘ಶ್ವಾಸಕೋಶದ ಕಸಿ ವಿಧಾನವು ಹೆಚ್ಚು ಅಪಾಯದಿಂದ ಕೂಡಿದೆ. ದಾನಿಯ ಶ್ವಾಸಕೋಶಗಳು ಸ್ವೀಕರಿಸುವವರಿಗೆ ಹೊಂದಾಣಿಕೆಯಾಗುವುದು ಮುಖ್ಯ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.