ADVERTISEMENT

ಹಾಪ್‌ಕಾಮ್ಸ್‌ ಮಳಿಗೆಗಳಲ್ಲೇ ‘ಸಂಕ್ರಾಂತಿ ಮೇಳ’

ಮೇಳ ನಡೆಸಲು ಕೋವಿಡ್ ಅಡ್ಡಿ *ಹಬ್ಬದ ಉತ್ಪನ್ನಗಳಿಗೆ ವಿಶೇಷ ದರ ನಿಗದಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 16:57 IST
Last Updated 12 ಜನವರಿ 2022, 16:57 IST
ಸಂಕ್ರಾಂತಿ ಮೇಳ (ಸಾಂದರ್ಭಿಕ ಚಿತ್ರ)
ಸಂಕ್ರಾಂತಿ ಮೇಳ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಲಾಲ್‌ಬಾಗ್‌ ಆವರಣದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಹಾಪ್‌ಕಾಮ್ಸ್ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ನಡೆಯುತ್ತಿದ್ದ ‘ಸಂಕ್ರಾಂತಿ ಮೇಳ’ವನ್ನು ಕೋವಿಡ್ ಕಾರಣದಿಂದ ಈ ಬಾರಿ ರದ್ದು ಮಾಡಲಾಗಿದೆ.

ಹಾಪ್‌ಕಾಮ್ಸ್‌ನ ಮಳಿಗೆಗಳಲ್ಲೇ ಸಂಕ್ರಾಂತಿಗೆ ವಿಶೇಷವಾಗಿ ಬಳಸುವ ಗೆಣಸು, ಅವರೆ, ಬಾಳೆ, ಬೆಲ್ಲ, ಕಬ್ಬು, ಕೊಬ್ಬರಿ, ಕಡಲೆಕಾಯಿ, ಏಲಕ್ಕಿ ಬಾಳೆ, ರಸಬಾಳೆ, ಪಚ್ಚಬಾಳೆ, ನೇಂದ್ರ ಬಾಳೆ ಸೇರಿದಂತೆ ಅಗತ್ಯ ಉತ್ಪನ್ನಗಳ ಖರೀದಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಹಬ್ಬಕ್ಕಾಗಿ ಈ ಆಯ್ದ ಉತ್ಪನ್ನಗಳನ್ನು ವಿಶೇಷ ದರದಲ್ಲಿ ಮಾರಾಟ ಮಾಡಲು ಹಾಪ್‌ಕಾಮ್ಸ್‌ ಮುಂದಾಗಿದೆ.

‘ಸಂಕ್ರಾಂತಿ ವೇಳೆ ಬಳಕೆಯಾಗುವ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಸಂಕ್ರಾಂತಿ ಮೇಳ ಆಯೋಜಿಸುತ್ತಿದ್ದೆವು. ಈ ಬಾರಿಯೂ ಮೇಳ ಆಯೋಜಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಕೋವಿಡ್ ತೀವ್ರಗೊಂಡಿರುವ ಕಾರಣಕ್ಕೆ ಕೊನೆಯ ಹಂತದಲ್ಲಿ ಮೇಳ ರದ್ದು ಮಾಡಲಾಗಿದೆ’ ಎಂದುಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಎಸ್.ಮಿರ್ಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಗ್ರಾಹಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಸಂಕ್ರಾಂತಿ ಮೇಳ ಆಯೋಜಿಸಲಾಗಿದೆ. ಕೋವಿಡ್‌ ಪರಿಸ್ಥಿತಿ ಇರುವುದರಿಂದ ಹಬ್ಬಕ್ಕೆ ಬೇಕಾದ ಉತ್ಪನ್ನಗಳನ್ನುತಮ್ಮ ಸಮೀಪದ ಮಳಿಗೆಗಳಲ್ಲೇ ಖರೀದಿಸುವ ವ್ಯವಸ್ಥೆ ಕಲ್ಪಿಸಿದ್ದೇವೆ. ಆಯ್ದ ಉತ್ಪನ್ನಗಳನ್ನು ಹೊರತುಪಡಿಸಿ ಉಳಿದೆಲ್ಲ ಉತ್ಪನ್ನಗಳ ದರ ಯಥಾಸ್ಥಿತಿಯಲ್ಲಿ ಇರಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.