ಬೆಂಗಳೂರು: ಪ್ರವಾಸಿ ತಾಣವಾಗಬೇಕಿದ್ದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ‘ಮಲ್ಲತ್ತಹಳ್ಳಿ ಕೆರೆ’ ಕೊಳಚೆ, ಪ್ಲಾಸ್ಟಿಕ್, ರಾಸಾಯನಿಕ, ಮಲಮೂತ್ರ, ಕಳೆ ಗಿಡಗಳಿಂದ ಮಲಿನಗೊಂಡು ವಿಷವಾಗಿದೆ.
ಕೆರೆಯ ಮಧ್ಯದಲ್ಲಿ ನೀರು. ಸುತ್ತಲೂ ಜೊಂಡು ಹುಲ್ಲು, ಕಳೆ ಗಿಡ. ಒಮ್ಮೆ ಕಣ್ಣು ಹಾಯಿಸಿದರೆ ಕೆರೆಯ ಪಾತ್ರ ಒಂದು ಹುಲ್ಲುಗಾವಲಿನಂತೆ ಭಾಸವಾಗುತ್ತದೆ. ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ಅದರ ನಡುವೆಯೇ ಜಾನುವಾರುಗಳು ಹುಲ್ಲು ಮೇಯುತ್ತಿರುವ ನೋಟ ಕಣ್ಣಿಗೆ ಬೀಳುತ್ತದೆ.
ಬಿಬಿಎಂಪಿ ಅಭಿವೃದ್ಧಿಪಡಿಸುತ್ತಿರುವ ಈ ಕೆರೆಗೆ ಸುತ್ತಲೂ ತಂತಿಬೇಲಿ ಅಳವಡಿಸಿದ್ದರೂ ಅಲ್ಲಲ್ಲಿ ಕಿತ್ತು ಹೋಗಿದೆ. ಕಾವಲಿಗೆ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಜಾನುವಾರುಗಳು ಆಹಾರ ಅರಸಿ ಕೆರೆಯಂಗಳದಲ್ಲೇ ಬಿಡಾರ ಹೂಡುತ್ತಿವೆ.
ಕೆರೆಯಂಗಳದಲ್ಲಿ ನಿರ್ಮಿಸಿರುವ ತೊಟ್ಟಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿ ನಾಲ್ಕು ತಿಂಗಳಾಗುತ್ತಿದ್ದರೂ ಮೂರ್ತಿಗಳ ಅವಶೇಷಗಳನ್ನು ಇನ್ನೂ ತೆರವುಗೊಳಿಸಿಲ್ಲ. ವಾಯುವಿಹಾರಿಗಳ ವಿಶ್ರಾಂತಿಗೆ ನಿರ್ಮಿಸಿರುವ ಅಶ್ವತ್ಥ ಕಟ್ಟೆಯಲ್ಲಿ ಹಸುಗಳು ವಿಶ್ರಾಂತಿ ಪಡೆಯುತ್ತವೆ. ಕೆರೆ, ಅಶ್ವತ್ಥ ಕಟ್ಟೆ ಮತ್ತು ತೊಟ್ಟಿಯಲ್ಲಿ ಹಸುಗಳ ಸಗಣಿ ರಾರಾಜಿಸುತ್ತಿದೆ.
ಅನ್ನಪೂರ್ಣೇಶ್ವರಿನಗರ, ಐಟಿಐ ಎಂಪ್ಲಾಯೀಸ್ ಲೇಔಟ್, ವಿಶ್ವೇಶ್ವರಯ್ಯ ಲೇಔಟ್ ಹಾಗೂ ಸುತ್ತಮುತ್ತ ಪ್ರದೇಶಗಳ ಚರಂಡಿ ನೀರು ಈ ಕೆರೆಯ ಒಡಲು ಸೇರಿರುವುದರಿಂದ ನೀರು ಕಲುಷಿತಗೊಂಡಿದೆ. ಅದು ಕಪ್ಪುವರ್ಣಕ್ಕೆ ಬದಲಾಗಿದೆ. ಅಲ್ಲದೆ, ಕೆರೆಯ ಸುತ್ತಲೂ ತ್ಯಾಜ್ಯವೇ ತುಂಬಿಕೊಂಡಿದೆ.
ಕೆರೆಯನ್ನು ಅಭಿವೃದ್ಧಿಪಡಿಸಲು ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ನಡಿಗೆ ಪಥದಲ್ಲಿ ಹೆಜ್ಜೆ ಇಡಲು ಆಗದಷ್ಟು ಕಿತ್ತು ಹೋಗಿದೆ. ಪಥದ ಎರಡೂ ಬದಿಯಲ್ಲಿ ಕಳೆಗಿಡಗಳು ಬೆಳೆದಿವೆ. ಅವ್ಯವಸ್ಥೆಯ ಆಗರವಾಗಿರುವ ಈ ಕೆರೆಯಲ್ಲಿ ವಾಯುವಿಹಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸ್ಥಳೀಯ ನಿವಾಸಿಗಳ ಒಕ್ಕೊರಲ ಒತ್ತಾಯ.
ಕೆರೆಯು ತನ್ನೊಡಲಲ್ಲಿ ಜೊಂಡು ಬೆಳೆಸಿಕೊಂಡು, ಕೊಳಚೆ ನೀರನ್ನೆಲ್ಲಾ ತುಂಬಿಕೊಂಡು ನಲುಗುತ್ತಿದೆ. ಥಟ್ಟನೆ ನೋಡಿದರೆ ಕೆರೆಯೋ ಅಲ್ಲವೋ ಅನ್ನುವಂತಾಗಿದ್ದು, ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳ ಉತ್ಪತ್ತಿ ತಾಣವಾಗಿಯೂ ಮಾರ್ಪಟ್ಟಿದೆ.
‘ಮಾರಕ ರೋಗಗಳ ಭೀತಿಯಿಂದ ದಿನ ಕಳೆಯುವಂತಾಗಿದೆ. ಕೆರೆಯ ಹೂಳನ್ನು ತೆರವುಗೊಳಿಸಿ, ಹಸುಗಳು ಒಳ ಪ್ರವೇಶಿಸದಂತೆ ಕಿತ್ತುಹೋದ ತಂತಿ ಬೇಲಿಯನ್ನು ಸರಿಪಡಿಸಬೇಕು. ಹೊಲಸು ನೀರು ಕೆರೆಗೆ ಹರಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ನಿವಾಸಿ ವೇಲು ಆಗ್ರಹಿಸಿದರು.
‘ನಮಗೆ ಜೀವ ಜಲ ನೀಡುವ ಕೆರೆಗಳ ಸಂರಕ್ಷಣೆಗೆ ಬಿಬಿಎಂಪಿ ಅಧಿಕಾರಿಗಳು ಎಳ್ಳಷ್ಟೂ ಕಾಳಜಿ ವಹಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಕಿ ಅಂಶ
84 ಎಕರೆ -ಮಲ್ಲತ್ತಹಳ್ಳಿ ಕೆರೆಯ ವಿಸ್ತೀರ್ಣ
₹ 4 ಕೋಟಿ -ಕೆರೆ ಅಭಿವೃದ್ಧಿಗೆ ಮಂಜೂರಾಗಿರುವ ಮೊತ್ತ
***
ಸಿಂಗಾಪುರ ಕೆರೆಯಂಗಳದ ರಸ್ತೆ ಬಂದ್
ವಿದ್ಯಾರಣ್ಯಪುರ ಬಳಿಯ ಸಿಂಗಾಪುರ (ವಾರ್ಡ್ ನಂ 11) ಕೆರೆಯಲ್ಲಿ ಪ್ರಭಾವಿಗಳು ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ರಸ್ತೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಂದ್ ಮಾಡಿದೆ.
ಈ ಅಕ್ರಮ ರಸ್ತೆಯ ಒಂದು ಬದಿಗೆ ಬೇಲಿ ನಿರ್ಮಿಸಿರುವ ಪಾಲಿಕೆ ಮತ್ತೊಂದು ಬದಿಯಲ್ಲಿ ಭೂಮಿಯನ್ನು ಅಗೆದು ಈ ರಸ್ತೆ ಬಳಕೆಯಾಗದಂತೆ ಮಾಡಿದೆ.
ಸಿಂಗಾಪುರದ ಸರ್ವೆ ನಂಬರ್ 93ರಲ್ಲಿ 21 ಎಕರೆ 7 ಗುಂಟೆ ಪ್ರದೇಶದಲ್ಲಿ ಇರುವ ಕೆರೆಯ ಮಧ್ಯಭಾಗದಲ್ಲಿ ಕಟ್ಟಡ ತ್ಯಾಜ್ಯವನ್ನು ಸುರಿದು, ಅದನ್ನು ಜೆಸಿಬಿಯಿಂದ ಸಮ ಮಾಡಿಸಿ 100 ಅಡಿಯಷ್ಟು ಅಗಲವಾದ ರಸ್ತೆಯನ್ನು ಇಲ್ಲಿನ ರಿಯಲ್ ಎಸ್ಟೇಟ್ ಕುಳಗಳು ನಿರ್ಮಿಸಿಕೊಂಡಿದ್ದರು. ಇದರಿಂದ ಕೆರೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗಿತ್ತು.
ಈ ಕುರಿತು ‘ಪ್ರಜಾವಾಣಿ’ ಡಿಸೆಂಬರ್ 13ರಂದು ‘ಕಳ್ಳರಸ್ತೆ ಸಿಂಗಾಪುರ ಕೆರೆಯನ್ನೇ ನುಂಗಿತ್ತಾ...’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.
**
ಬಿಡುಗಡೆಯಾಗದ ಅನುದಾನ
‘ಬಿಡಿಎ ಈ ಕೆರೆಯನ್ನು ಕಳೆದ ವರ್ಷ ಬಿಬಿಎಂಪಿಗೆ ಹಸ್ತಾಂತರಿಸಿದೆ. ಮಂಜೂರಾದ ಅನುದಾನ ಇದುವರೆಗೂ ಬಿಡುಗಡೆ ಆಗಿಲ್ಲ. ಕೆರೆಯ ಒಡಲಿಗೆ ಕಲುಷಿತ ನೀರು ಸೇರದಂತೆ ಕೈಗೊಂಡ ಕಾಮಗಾರಿ ಅರ್ಧಕ್ಕೆ ನಿಂತಿದೆ. ಬಾಕಿ ಅನುದಾನದ ಜತೆಗೆ ಕೆರೆ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಹಣ ನೀಡುವಂತೆ ಸರ್ಕಾರಕ್ಕೆ ಕೋರಿದ್ದೇವೆ. ಚರಂಡಿ ನೀರು ಕೆರೆಗೆ ಹರಿಯದಂತೆ ಕಾಮಗಾರಿ ಕೈಗೊಂಡಾಗ ತಂತಿ ಬೇಲಿ ಕಿತ್ತು ಹಾಕಲಾಗಿತ್ತು’ ಎಂದು ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ರೊಬ್ಬರು ಹೇಳಿದರು.
**
‘ಸ್ಥಳೀಯ ರಾಜಕೀಯ ನಾಯಕರ ಬಲದಿಂದ ನಗರದ ಕೆರೆಗಳ ಒತ್ತುವರಿ ಹೆಚ್ಚಾಗಿದ್ದು, ಅವುಗಳು ವಿನಾಶದ ಅಂಚಿನಲ್ಲಿವೆ. ಹೀಗೇ ಮುಂದುವರಿದರೆ ಕೆರೆ ಕಣ್ಮರೆಯಾಗಿ ಅದರ ನೆನಪು ಮಾತ್ರ ಉಳಿದಿರುತ್ತವೆ. ಪ್ರತಿಯೊಬ್ಬರು ನಮ್ಮದು ಎಂಬ ಭಾವನೆ ಬೆಳೆಸಿಕೊಂಡರೆ ಒತ್ತುವರಿಗೆ ಕಡಿವಾಣ ಬೀಳಲಿದೆ’
–ಶಿವರಾಜ್ ಕುಮಾರ್,ವಿದ್ಯಾರ್ಥಿ
**
‘ಅಯ್ಯೋ... ಹೆಸರಿಗಷ್ಟೇ ಕಾವಲಿಗಾಗಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿದ್ದರೆ ಹಸುಗಳು ಕೆರೆ ಪ್ರವೇಶಿಸುತ್ತಿದ್ದವೇ? ಸ್ಥಳೀಯರು ಶೌಚಕ್ಕೆ ಹೋಗುತ್ತಿದ್ದರೆ? ಕೆರೆಗಳ ಅಭಿವೃದ್ಧಿಗೆ ಸ್ಥಳೀಯ ಮುಖಂಡರೇ ಹಿಂದೇಟು ಹಾಕುತ್ತಿದ್ದಾರೆ’
–ವೇಲು,ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.