ADVERTISEMENT

ಸೇಲಂನಿಂದ ಬಂದ ಮೂರು ಟನ್ ಮಲ್ಲಿಗೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 19:51 IST
Last Updated 20 ಏಪ್ರಿಲ್ 2019, 19:51 IST
ಮನು ಅವರು ಕರಗ ಹೊತ್ತು ದೇವಸ್ಥಾನದಿಂದ ಹೊರಬಂದಾಗ ಭಕ್ತರು ಹೂವು ಎರಚಿ ಸ್ವಾಗತಿಸಿದರು      ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್ ಪಿ.ಎಸ್.
ಮನು ಅವರು ಕರಗ ಹೊತ್ತು ದೇವಸ್ಥಾನದಿಂದ ಹೊರಬಂದಾಗ ಭಕ್ತರು ಹೂವು ಎರಚಿ ಸ್ವಾಗತಿಸಿದರು      ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್ ಪಿ.ಎಸ್.   

ಬೆಂಗಳೂರು: ಬೆಂಗಳೂರಿನ ವಿಶ್ವವಿಖ್ಯಾತ ಧರ್ಮರಾಯಸ್ವಾಮಿ ದೇವರ ಕರಗ ಶಕ್ತ್ಯೋತ್ಸವಕ್ಕೆ ತಮಿಳುನಾಡಿನ ಸೇಲಂನಿಂದ 3 ಟನ್ ಮಲ್ಲಿಗೆ ಹೂವು ತರಿಸಲಾಗಿತ್ತು.

ಕರಗದಲ್ಲಿ ಮಲ್ಲಿಗೆ ಹೂವು ಪ್ರಮುಖ ಆಕರ್ಷಣೆ. ವೀರಕುಮಾರರು, ಗೌಡರು, ಗಣಾಚಾರಿಗಳು, ಗಂಟೆ ಪೂಜಾರಿ, ಧರ್ಮದರ್ಶಿಗಳು, ಗಣ್ಯರಿಗಾಗಿ ವಿಶೇಷ ಮಲ್ಲಿಗೆ ಹಾರ ಬಳಸಲಾಗಿತ್ತು. ಎಲ್ಲರೂ ಕರಗ ಮುಗಿಯುವ ತನಕ ಹಾರ ಹಾಕಿಕೊಂಡೇ ಇದ್ದರು. ಅರ್ಚಕ ಮನು ಅವರು ಕರಗ ಹೊರುವ ಮೊದಲ ಅವಕಾಶವನ್ನು ಸಮರ್ಥವಾಗಿ ನಿಭಾಯಿಸಿದರು ಎಂದು ಸಮಿತಿ ಸದಸ್ಯರು ಹೇಳಿದರು.

ಅಂತಿಮ ದಿನವಾದ ಭಾನುವಾರ ಸಂಜೆ 4ಕ್ಕೆ ವಸಂತೋತ್ಸವ ಓಕುಳಿಯಾಟ ನಡೆಯಲಿದೆ. ರಾತ್ರಿ 12ಕ್ಕೆ ಧ್ವಜಾರೋಹಣದ ನಂತರ ತೆರೆ ಬೀಳಲಿದೆ.

ADVERTISEMENT

ಕರಗದಲ್ಲಿ ಕಿತ್ತಾಟ; ವಿಡಿಯೊ ವೈರಲ್: ಹಲಸೂರು ಗೇಟ್ ಸಮೀಪದ ಧರ್ಮರಾಯ ದೇವಸ್ಥಾನದ ಬಳಿ ಶುಕ್ರವಾರ ರಾತ್ರಿ ಕರಗ ಆಚರಣೆ ವೇಳೆ ಇಬ್ಬರು ಪಾನಮತ್ತ ಯುವಕರು ಪೊಲೀಸರ ಎದುರೇ ಬಡಿದಾಡಿಕೊಂಡಿದ್ದಾರೆ.

ರಾತ್ರಿ 12.30ರ ಸುಮಾರಿಗೆ ಯುವಕರು ಏಕಾಏಕಿ ಒಬ್ಬರಿಗೊಬ್ಬರು ಹೊಡೆದುಕೊಳ್ಳುತ್ತ ಜನರ ಮೇಲೆ ಬಿದ್ದಿದ್ದಾರೆ. ಜಗಳ ಬಿಡಿಸಲು ಬಂದ ಪೊಲೀಸರನ್ನೇ ತಳ್ಳಿ ಗಲಾಟೆ ಮಾಡಿಕೊಂಡಿದ್ದಾರೆ. ಈ ದೃಶ್ಯವನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದು, ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹುಡುಗಿಯನ್ನು ಚುಡಾಯಿಸಿದ ವಿಚಾರಕ್ಕೆ ಗಲಾಟೆ ಶುರುವಾಯಿತು ಎನ್ನಲಾಗಿದೆ. ಆದರೆ, ‘ಕ್ಷುಲ್ಲಕ ಕಾರಣಕ್ಕೆ ಯುವಕರು ಕಿತ್ತಾಡಿಕೊಂಡಿದ್ದರು. ಇಬ್ಬರನ್ನೂ ವಶಕ್ಕೆ ಪಡೆದು, ಬುದ್ಧಿ ಹೇಳಿ ಬಿಟ್ಟು ಕಳುಹಿಸಿದೆವು’ ಎಂದು ಹಲಸೂರು ಗೇಟ್ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.