ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಅಪಘಾತ ಸಂಭವಿಸಿದ್ದು, ಖಾಸಗಿ ಕಂಪನಿ ಉದ್ಯೋಗಿ ಸಂಜೀವ್ಕುಮಾರ್ (32) ಎಂಬುವರು ಮೃತಪಟ್ಟಿದ್ದಾರೆ.
‘ಜಾರ್ಖಂಡ್ನ ಸಂಜೀವ್ಕುಮಾರ್ ಉದ್ಯೋಗಕ್ಕಾಗಿ ನಗರಕ್ಕೆ ಬಂದಿದ್ದರು. ಜಾಲಹಳ್ಳಿ ಬಳಿಯ ಅಪಾರ್ಟ್ಮೆಂಟ್ ಸಮುಚ್ಚಯವೊಂದರಲ್ಲಿ ನೆಲೆಸಿದ್ದರು’ ಎಂದು ಪೊಲೀಸರು ಹೇಳಿದರು.
‘ಸಂಜೀವ್ ಅವರು ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ದೇವನಹಳ್ಳಿಯಿಂದ ಬೆಂಗಳೂರಿನತ್ತ ಕಾರಿನಲ್ಲಿ ಬರುತ್ತಿದ್ದರು. ಇದೇ ಮಾರ್ಗದಲ್ಲೇ ಆಂಬುಲೆನ್ಸ್ ಚಿಕ್ಕಬಳ್ಳಾಪುರದಿಂದ ನಗರಕ್ಕೆ ಬರುತ್ತಿತ್ತು. ಚಾಲಕ ಅತೀ ವೇಗವಾಗಿ ಆಂಬುಲೆನ್ಸ್ ಚಲಾಯಿಸಿದ್ದ. ಜಕ್ಕೂರು ಮೇಲ್ಸೇತುವೆಯಲ್ಲಿ ಎದುರಿಗೆ ಹೊರಟಿದ್ದ ಕಾರಿಗೆ ಆಂಬುಲೆನ್ಸ್ ಗುದ್ದಿತ್ತು. ನಂತರ, ಅದೇ ಕಾರು ಎದುರಿಗೆ ಹೊರಟಿದ್ದ ಆಟೊಗೆ ಡಿಕ್ಕಿ ಹೊಡೆದಿತ್ತು. ಸರಣಿ ಅಪಘಾತದಿಂದಾಗಿ ಕಾರಿನಲ್ಲಿದ್ದ ಸಂಜೀವ್ಕುಮಾರ್ ಹಾಗೂ ಆಟೊದಲ್ಲಿದ್ದ ಯಾರಬ್ ತೀವ್ರವಾಗಿ ಗಾಯಗೊಂಡಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸಂಜೀವ್ ಅಸುನೀಗಿದ್ದಾರೆ’ ಎಂದು ತಿಳಿಸಿದರು.
‘ಚಿಕ್ಕಬಳ್ಳಾಪುರದಿಂದ ರೋಗಿಯೊಬ್ಬರನ್ನು ನಗರಕ್ಕೆ ಕರೆತರಲಾಗುತ್ತಿತ್ತು. ಆಂಬುಲೆನ್ಸ್ ಚಾಲಕನ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.