ಬೆಂಗಳೂರು: ಭಯೋತ್ಪಾದನಾ ಸಂಘಟನೆಗಳ ಪರ ಗೋಡೆ ಬರಹ ಬರೆದಿದ್ದ ಪ್ರಕರಣದಲ್ಲಿ ಮೂವರು ಶಂಕಿತ ಉಗ್ರರ ವಿರುದ್ಧ ಎನ್ಐಎ (ರಾಷ್ಟ್ರೀಯ ತನಿಖಾ ದಳ) ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
‘ಲಷ್ಕರ್–ಎ–ತಯಬಾ ಹಾಗೂ ತಾಲಿಬಾನ್ ಪರವಾಗಿ ಮಂಗಳೂರಿನ ಬಿಜೈ ಹಾಗೂ ನ್ಯಾಯಾಲಯ ರಸ್ತೆಯ ಗೋಡೆಗಳ ಮೇಲೆ ಬರಹ ಬರೆಯಲಾಗಿತ್ತು. ಕೃತ್ಯ ಎಸಗಿದ್ದ ಶಂಕಿತರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಬಟ್ಟೆ ವ್ಯಾಪಾರಿ ಮೊಹಮ್ಮದ್ ಶಾರೀಕ್, ಎಂಜಿನಿಯರಿಂಗ್ ವಿದ್ಯಾರ್ಥಿ ಮಾಝ್ ಮುನೀರ್ ಅಹ್ಮದ್ ಹಾಗೂ ಅರಾಫತ್ ಅಲಿಯನ್ನು ಬಂಧಿಸಲಾಗಿತ್ತು’ ಎಂದು ಎನ್ಐಎ ಮೂಲಗಳು ಹೇಳಿವೆ.
‘ಶಾರೀಕ್ ಹಾಗೂ ಮಾಝ್ ಮುನೀರ್ ವಿರುದ್ಧ ಈಗಾಗಲೇ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಇದೀಗ, ಇವರಿಬ್ಬರ ವಿರುದ್ಧ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಇನ್ನೊಬ್ಬ ಶಂಕಿತ ಅರಾಫತ್ ಅಲಿ, ಘಟನೆ ಬಳಿಕ ತಲೆಮರೆಸಿಕೊಂಡಿದ್ದ. ದೆಹಲಿ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರ್ 13ರಂದು ಈತನನ್ನು ಬಂಧಿಸಲಾಗಿತ್ತು. ಈತನ ವಿರುದ್ಧ ಇದೀಗ ಪ್ರಾಥಮಿಕ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ನೀಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.
‘ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರ ಜೊತೆ ನಂಟು ಹೊಂದಿದ್ದ ಎಂಜಿನಿಯರಿಂಗ್ ಪದವೀಧರ ಅರಾಫತ್ ಅಲಿ, ಕ್ರಿಪ್ಟೊ ಮೂಲಕ ಹಣ ಪಡೆದುಕೊಂಡಿದ್ದ. ಅದೇ ಹಣವನ್ನು ಶಾರೀಕ್ ಹಾಗೂ ಮಾಝ್ಗೆ ನೀಡಿದ್ದ. ಅವರಿಬ್ಬರು ಗೋಡೆ ಬರಹ ಬರೆದಿದ್ದರು. ಈ ಮೂಲಕ ಜನರಲ್ಲಿ ಭಯವನ್ನುಂಟು ಮಾಡಲು ಯತ್ನಿಸಿದ್ದರು. ಜೊತೆಗೆ, ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿದ್ದರು’ ಎಂದು ಹೇಳಿವೆ.
‘ಗೋಡೆ ಬರಹ ಪ್ರಕರಣದಲ್ಲಿ ಭಾಗಿಯಾಗಿದ್ದ ಶಾರೀಕ್, ಕುಕ್ಕರ್ ಬಾಂಬ್ ಸಾಗಣೆ ಸಂದರ್ಭದಲ್ಲಿ ಸ್ಫೋಟವಾಗಿ ಗಾಯಗೊಂಡಿದ್ದ. ಈತನ ವಿಚಾರಣೆಯಿಂದ ಗೋಡೆ ಬರಹದ ಬಗ್ಗೆ ಮಾಹಿತಿ ಸಿಕ್ಕಿತ್ತು’ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.