ADVERTISEMENT

ತರಕಾರಿ–ಸೊಪ್ಪಿನ ದರಗಳು ಏರಿಕೆ

ಬೇಸಿಗೆ ಕಾವೇರಿದಂತೆಯೇ ಹೆಚ್ಚಾಯಿತು ಬೇಡಿಕೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 18:46 IST
Last Updated 30 ಮಾರ್ಚ್ 2021, 18:46 IST
ಕೆ.ಆರ್.ಮಾರುಕಟ್ಟೆ (ಸಾಂದರ್ಭಿಕ ಚಿತ್ರ)
ಕೆ.ಆರ್.ಮಾರುಕಟ್ಟೆ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಬೇಸಿಗೆಕಾವೇರುತ್ತಿದ್ದಂತೆಯೇ ತರಕಾರಿ, ಸೊಪ್ಪು ಹಾಗೂ ಹಣ್ಣಿನ ದರಗಳು ದಿಢೀರ್ ಏರಿಕೆ ಕಂಡಿವೆ. ಕಳೆದ ವಾರ ಕಡಿಮೆ ಇದ್ದ ಕೆಲ ತರಕಾರಿಗಳು ಈಗ ದುಬಾರಿಯಾಗಿವೆ.

ಮಾರ್ಚ್‌ನಿಂದ ಜೂನ್‌ವರೆಗಿನ ಬೇಸಿಗೆ ಅವಧಿಯಲ್ಲಿ ಹಣ್ಣುಗಳಿಗೆ ಭಾರಿ ಬೇಡಿಕೆ ಇರುತ್ತದೆ. ತರಕಾರಿ ಹಾಗೂ ಸೊಪ್ಪಿನ ಬೆಳೆಗಳುಬೇಸಿಗೆಯ ಧಗೆಗೆ ಹೆಚ್ಚು ಹಾನಿಯಾಗುತ್ತದೆ. ಕ್ರಮೇಣ ಇಳುವರಿಯೂ ಕುಸಿತ ಕಾಣುವುದರಿಂದ ತರಕಾರಿ ಹಾಗೂ ಸೊಪ್ಪಿಗೂ ಬೇಡಿಕೆ ಹೆಚ್ಚಾಗುತ್ತದೆ.

ಹಸಿ ಮೆಣಸಿನಕಾಯಿ ಹಾಗೂ ಬೀನ್ಸ್‌ ದರಗಳು ವಾರದ ಹಿಂದೆ ಕಡಿಮೆ ಇದ್ದವು. ಈಗ ಎರಡಕ್ಕೂ ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆಗಳು ಏರಿವೆ. ಶುಂಠಿ, ಬೆಳ್ಳುಳ್ಳಿ ದರಗಳು ಸ್ಥಿರವಾಗಿದ್ದು,ಬದನೆ, ಕ್ಯಾರೆಟ್, ಮೂಲಂಗಿ, ಆಲೂಗಡ್ಡೆ, ಈರುಳ್ಳಿ, ಟೊಮೆಟೊ ದರಗಳು ಪ್ರತಿ ಕೆ.ಜಿಗೆ ₹30ರ ಒಳಗಿವೆ.

ADVERTISEMENT

‘ಬೇಸಿಗೆ ತಾಪದಿಂದ ಒಂದು ವಾರದಿಂದ ತರಕಾರಿ ದರಗಳು ಏರುತ್ತಿವೆ. ಶುಭ ಸಮಾರಂಭಗಳು ನಡೆಯುತ್ತಿರುವುದರಿಂದ ಬೇಡಿಕೆಯೂ ಇದೆ. ತರಕಾರಿಗಳ ದರ ಹೆಚ್ಚಾಗಲು ಇದು ಕೂಡ ಕಾರಣ. ಒಂದು ತಿಂಗಳವರೆಗೆ ತರಕಾರಿ ದರಗಳ ಏರಿಳಿತ ಸಾಮಾನ್ಯ’ ಎಂದು ಕೆ.ಆರ್.ಮಾರುಕಟ್ಟೆಯ ತರಕಾರಿ ವರ್ತಕ ಸೋಮಶೇಖರ್ ತಿಳಿಸಿದರು.

ಏರಿತು ಸೊಪ್ಪಿನ ದರ: ಕಳೆದ ವಾರ ಎಲ್ಲ ಸೊಪ್ಪಿನ ಚಿಲ್ಲರೆ ದರಗಳು ₹10ರ ಗಡಿ ದಾಟಿರಲಿಲ್ಲ. ಈ ಪೈಕಿ ಕೊತ್ತಂಬರಿ ಸೊಪ್ಪಿನ ದರ ಪ್ರತಿ ಕೆ.ಜಿ.ಗೆ 36ರಿಂದ 52ಕ್ಕೆ ಜಿಗಿದಿದೆ. ಮೆಂತ್ಯ, ಪಾಲಕ್, ಸಬ್ಬಕ್ಕಿ ಸೊಪ್ಪಿನ ದರಗಳೂ ತಲಾ ₹2ಕ್ಕಿರಂತ ಹೆಚ್ಚಳ ಕಂಡಿದೆ.

‘ಬೇಸಿಗೆ ಅವಧಿಯಲ್ಲಿ ಸೊಪ್ಪಿನ ಬೆಳೆ ರೈತರಿಗೆ ಕೈಗೆಟಕುವುದಿಲ್ಲ. ಬಿಸಿಲ ಹೊಡೆತಕ್ಕೆ ಸೊಪ್ಪು ತೋಟದಲ್ಲೇ ಹಾಳಾಗುತ್ತವೆ. ಬೆಳೆಯುವ ಸೊಪ್ಪಿನಲ್ಲಿ ಶೇ 50ರಷ್ಟು ಮಾತ್ರ ಮಾರುಕಟ್ಟೆಗೆ ಆವಕವಾಗುತ್ತದೆ. ಹಾಗಾಗಿ, ಬೇಸಿಗೆಯಲ್ಲಿ ಸೊಪ್ಪುಗಳಿಗೆ ತುಸು ಬೇಡಿಕೆ ಇದ್ದೇ ಇರುತ್ತದೆ. ಯುಗಾದಿ ವೇಳೆಗೆ ಕೊತ್ತಂಬರಿ ಸೊಪ್ಪಿನ ದರ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ದಾಸನಪುರ ಎಪಿಎಂಪಿ ಪ್ರಾಂಗಣದ ಸೊಪ್ಪಿನ ವ್ಯಾಪಾರಿ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.