ಬೆಂಗಳೂರು:ನಾಲ್ಕು ವಿವಾಹವಾದ ಮತ್ತು ಪ್ರೀತಿಸುವ ನೆಪದಲ್ಲಿ 20ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದ ಆರೋಪದಲ್ಲಿ ಬ್ಯಾಡರಹಳ್ಳಿ ಪೊಲೀಸರು ಸುರೇಶ್ ಅಲಿಯಾಸ್ ಮೈಸೂರು ಸುರೇಶ ಎಂಬಾತನನ್ನು ಬಂಧಿಸಿದ್ದಾರೆ.
ಮ್ಯಾಟ್ರಿಮೋನಿಯಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡು ಮದುವೆ ಆಗುವುದಾಗಿ ನಂಬಿಸಿ ವಂಚಿಸುತ್ತಿದ್ದ ಬಗ್ಗೆ ಮಹಿಳೆಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ವಿಷಯ ಬಹಿರಂಗವಾಗಿದೆ. ಆರೋಪಿಯ ಮಾತಿಗೆ ಮರುಳಾಗಿ ಮಾಂಗಲ್ಯ ಸರ ಸೇರಿ 80 ಗ್ರಾಂ ಚಿನ್ನಾಭರಣ ಮತ್ತು ಹಣವನ್ನು ದೂರುದಾರ ಮಹಿಳೆ ಕಳೆದುಕೊಂಡಿದ್ದರು.
ವಿಧವೆಯರನ್ನೇ ಗುರಿಯಾಗಿಸಿ ಆರೋಪಿ ಸುರೇಶ, ಹಣ ಪಡೆದು ಬಳಿಕ ವಂಚಿಸುತ್ತಿದ್ದ. ಮೈಸೂರಿನವನಾದ ಈತ 2013ರಲ್ಲಿ ಮದುವೆಯಾಗಿ ವಿಚ್ಛೇದನ ಪಡೆದಿದ್ದ. ಪತ್ನಿ ದೂರವಾದ ಬಳಿಕ ವಿಚ್ಛೇದಿತ ಮಹಿಳೆಯರನ್ನು ಬಲೆಗೆ ಹಾಕಿಕೊಳ್ಳುತ್ತಿದ್ದ. ಹೀಗೆ ಮಾಡುತ್ತಲೇ 4–5 ವರ್ಷಗಳಲ್ಲಿ ಮೂವರನ್ನು ಮದುವೆಯಾಗಿದ್ದಾನೆ. ಮತ್ತಷ್ಟು ಮಹಿಳೆಯರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಬಗ್ಗೆ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
‘ನಿವೇಶನ ಖರೀದಿಸುವ ನೆಪದಲ್ಲಿ ವಿಧವೆಯರಿಂದ ಹಣ ಪಡೆಯುತ್ತಿದ್ದ’ ಎಂದೂ ಪೊಲೀಸರು ವಿವರಿಸಿದರು.
ಆರೋಪಿ ಹಲವು ಜಿಲ್ಲೆಗಳಲ್ಲಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.