ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಯಲು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ಬಿಬಿಎಂಪಿ ಸಿಬ್ಬಂದಿ, ಪೊಲೀಸರು ಹಾಗೂ ಆರೋಗ್ಯ ವಲಯದ ಕಾರ್ಯಕರ್ತರಿಗೆ ಜವಳಿ ವ್ಯಾಪಾರಿ ರಮೇಶ್ ಕುಮಾರ್ ಶಾ ನೇತೃತ್ವದ ಆರ್.ಕೆ. ಟ್ರಸ್ಟ್ ‘ಮಾಸ್ಕ್ ಇಂಡಿಯಾ’ ಕಾರ್ಯಕ್ರಮಡಿ 10 ಲಕ್ಷ ಮಾಸ್ಕ್ಗಳನ್ನು ಉಚಿತವಾಗಿ ವಿತರಿಸಿದೆ.
ಅಲ್ಲದೆ ಕಂಟೈನ್ಮೆಂಟ್ ವಲಯಗಳು, ಜನದಟ್ಟಣೆ ಪ್ರದೇಶಗಳು, ಅಸಕ್ತ, ಅಸಹಾಯಕ ಜನ ನೆಲೆಸಿದ ಸ್ಥಳಗಳು, ರೈಲುಗಳ ಮೂಲಕ ತವರಿಗೆ ಹೊರಟ ವಲಸೆ ಕಾರ್ಮಿಕರಿಗೆ ಮಾಸ್ಕ್ಗಳನ್ನು ಟ್ರಸ್ಟ್ ನೀಡಿದೆ. ಪರಿಸರಸ್ನೇಹಿ ಮಾಸ್ಕ್ಗಳನ್ನು ವಿತರಿಸಿರುವ ಟ್ರಸ್ಟ್, ಕೊರೊನಾ ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರದ ಜೊತೆ ಕೈಜೋಡಿಸಿದೆ.
ರಾಜಸ್ಥಾನದವರಾದ ಶಾ, 40 ವರ್ಷಗಳಿಂದ ಬೆಂಗಳೂರಿನಲ್ಲಿ ಜವಳಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ‘ನಾವೀಗ ಕೊರೊನಾ ಜೊತೆಗೇ ಬದುಕಬೇಕಿದೆ. ಹೀಗೆ, ಬದುಕುವ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಅನಿವಾರ್ಯವೂ ಹೌದು. ಇದನ್ನು ಗಮನದಲ್ಲಿಟ್ಟು, ಜನಸಾಮಾನ್ಯರಿಗೆ ನೆರವಾಗುವ ಉದ್ದೇಶದಿಂದ ಮಾಸ್ಕ್ ಹಂಚಲು ನಿರ್ಧರಿಸಿದೆ’ ಎಂದರು.
‘ನಗರದಲ್ಲಿರುವ ಎಂಟು ಗಾರ್ಮೆಂಟ್ಸ್ ಕಂಪನಿಗಳಲ್ಲಿ ಉತ್ತಮ ದರ್ಜೆಯ ಹತ್ತಿ ಬಟ್ಟೆಗಳನ್ನು ಬಳಸಿ, ವೈದ್ಯರ ಸಲಹೆಯಂತೆ ಈ ಮಾಸ್ಕ್ಗಳನ್ನು ವಿಶೇಷವಾಗಿಸಿದ್ಧಪಡಿಸಲಾಗಿದೆ. ಇವುಗಳನ್ನು ತೊಳೆದು ಮತ್ತೆ ಬಳಸಬಹುದು. ರೈಲ್ವೆ ಭದ್ರತಾ ಪಡೆ ಸಿಬ್ಬಂದಿ, ಮಲ್ಲೇಶ್ವರದಲ್ಲಿರುವ ಕೆ.ಸಿ. ಜನರಲ್ ಆಸ್ಪತ್ರೆ ಮತ್ತಿತರ ಕಡೆಗಳಲ್ಲೂ ಮಾಸ್ಕ್ ಹಂಚಿದ್ದೇವೆ‘ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.