ಬೆಂಗಳೂರು:‘ನಗರದಲ್ಲಿರುವ ಎಲ್ಲ ಹಾಪ್ಕಾಮ್ಸ್ ಮಳಿಗೆಗಳಲ್ಲಿ ಫೆ.25ರಿಂದ ರಿಯಾಯಿತಿ ದರದಲ್ಲಿ ದ್ರಾಕ್ಷಿ ಮತ್ತು ಕಲ್ಲಂಗಡಿ ಮಾರಾಟ ಮೇಳ ಆಯೋಜಿಸಲಾಗಿದೆ’ ಎಂದು ಹಾಪ್ಕಾಮ್ಸ್ನ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಎಸ್.ಮಿರ್ಜಿ ತಿಳಿಸಿದರು.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಪ್ರತಿ ವರ್ಷದಂತೆ ಈ ಬಾರಿಯೂ ಶೇ 10ರಷ್ಟು ರಿಯಾಯಿತಿ ದರದಲ್ಲಿ ದ್ರಾಕ್ಷಿ ಮತ್ತು ಕಲ್ಲಂಗಡಿ ಮಾರಾಟ ಮೇಳ ನಡೆಯಲಿದೆ. 13 ತಳಿಯ ದ್ರಾಕ್ಷಿ ಹಾಗೂ ಮೂರು ತಳಿಯ ಕಲ್ಲಂಗಡಿ ಮೇಳದಲ್ಲಿ ಇರಲಿದೆ. 500 ಟನ್ ದ್ರಾಕ್ಷಿ ಹಾಗೂ 1,500 ಟನ್ ಕಲ್ಲಂಗಡಿ ಮಾರಾಟ ಮಾಡುವ ಗುರಿ ಇದೆ’ ಎಂದರು.
‘ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್ಆರ್) ಅಭಿವೃದ್ಧಿ ಪಡಿಸಿರುವಮಾಂಜರಿ ಮೆಡಿಕಾ,ಮಾಂಜರಿ ನವೀನ,ಮಾಂಜರಿ ಶ್ಯಾಮ ಹಾಗೂ ಫ್ಲೇಮ ಎಂಬ ದ್ರಾಕ್ಷಿ ತಳಿಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗುವುದು’ ಎಂದು ಮಾಹಿತಿ ನೀಡಿದರು.
ಇಂದು ಮೇಳ ಉದ್ಘಾಟನೆ:‘ಹಾಪ್ಕಾಮ್ಸ್ನ ಎಲ್ಲ ಮಳಿಗೆಗಳಲ್ಲಿ ಫೆ.25ರಿಂದ ಮೇಳ ಆರಂಭಗೊಳ್ಳಲಿದೆ. ಲಾಲ್ಬಾಗ್ ಬಳಿಯ ಎಂ.ಎಚ್.ಮರಿಗೌಡ ರಸ್ತೆಯಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿಬೆಳಿಗ್ಗೆ 10.30ಕ್ಕೆ ಮೇಳಕ್ಕೆ ತೋಟಗಾರಿಕೆ ಸಚಿವ ಆರ್.ಶಂಕರ್ ಚಾಲನೆ ನೀಡಲಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.