ಬೆಂಗಳೂರು: ದಿವಂಗತ ಚಿತ್ರನಟ ವಿಷ್ಣುವರ್ಧನ್ ಅವರ 9ನೇ ಪುಣ್ಯ ಸ್ಮರಣೆಗೆರಾಜ್ಯದ ವಿವಿಧೆಡೆಯಿಂದ ಜನಸಾಗರ ಹರಿದು ಬಂತು.
ಸಾವಿರಾರು ಅಭಿಮಾನಿಗಳು ಸರತಿ ಸಾಲಿನಲ್ಲಿ ಬಂದು ಕೆಂಗೇರಿ ಸಮೀಪದಲ್ಲಿನ ಅಭಿಮಾನ್ ಸ್ಟುಡಿಯೋದಲ್ಲಿನ ವಿಷ್ಣು ಸಮಾಧಿಗೆ ನಮನ ಸಲ್ಲಿಸಿದರು. ತಮ್ಮ ನೆಚ್ಚಿನ ನಟನಿಗೆ ಹೂಗುಚ್ಛ ಅರ್ಪಿಸಿ ಅಭಿಮಾನ ಮೆರೆದರು.
ಮುಂಜಾವಿನಿಂದಲೇ ಸಮಾಧಿ ಸ್ಥಳಕ್ಕೆ ಆಗಮಿಸಿದ ಅಭಿಮಾನಿಗಳು ಸ್ಮಾರಕ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ‘9 ವರ್ಷ ಕಳೆದರೂ ಕಾಮಗಾರಿ ಆರಂಭಗೊಂಡಿಲ್ಲ. ಇದು ನಾಡಿನ ಶ್ರೇಷ್ಠ ಕಲಾವಿದನಿಗೆ ಹಾಗೂ ರಾಜ್ಯಕ್ಕೆ ಆಗುತ್ತಿರುವ ಅಪಮಾನ. ಸರ್ಕಾರ ಅಭಿಮಾನ್ ಸ್ಟುಡಿಯೋದಲ್ಲೇ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಬೇಕಾಗುವ ಜಮೀನು ಖರೀದಿ ಮಾಡಿ, ಕಾಮಗಾರಿ ಆರಂಭಿಸಬೇಕು’ ಎಂದು ಆಗ್ರಹಿಸಿದರು.
ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ.ಬಿ.ಲೋಕೇಶ್ ಗೌಡ,‘ಸರ್ಕಾರ ಮುಂದಾಳತ್ವ ವಹಿಸಿ ಸ್ಟುಡಿಯೋ ವ್ಯಾಪ್ತಿಯ 2 ಎಕರೆ ಜಮೀನು ಖರೀದಿ ಮಾಡಿಕೊಡಲು ಮುಂದಾದರೆ, ಅಭಿಮಾನಿಗಳಿಂದಲೇ ₹ 50 ಲಕ್ಷ ಸಂಗ್ರಹಿಸಿ ಕೊಡುತ್ತೇವೆ’ ಎಂದರು.
ಪುಣ್ಯ ಸ್ಮರಣೆ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ‘ಸುಮಾರು 350 ಯೂನಿಟ್ ರಕ್ತ ಸಂಗ್ರಹವಾಗಿದೆ’ ಎಂದು ಶಿಬಿರ ಆಯೋಜಕರು ತಿಳಿಸಿದರು.
ಇದೇ ವೇಳೆ ಹಲವು ಅಭಿಮಾನಿಗಳು ಸಮಾಧಿ ಸ್ಥಳದಲ್ಲೇ ಸ್ಮಾರಕ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಕೆಲವು ನಿಮಿಷಗಳ ಕಾಲ ರಸ್ತೆ ತಡೆ ನಡೆಸಿದ ಘಟನೆಯೂ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.