ಬೆಂಗಳೂರು: ನಮ್ಮ ಮೆಟ್ರೊ ಸ್ವಯಂಚಾಲಿತ ಟಿಕೆಟ್ ದರ ಸಂಗ್ರಹ ವ್ಯವಸ್ಥೆಯ ಕಾರ್ಯಾಚರಣೆ ವಿಫಲವಾಗಿದ್ದರಿಂದ ಪ್ರಯಾಣಿಕರು ಬುಧವಾರ ರಾತ್ರಿ ತೀವ್ರ ಸಮಸ್ಯೆ ಎದುರಿಸಿದರು.
ಪ್ರಯಾಣಿಕರು ನಿಲ್ದಾಣದ ಗೇಟ್ ಮೂಲಕ ಪ್ಲಾಟ್ಫಾರಂ ಪ್ರವೇಶಿಸಲು ಸಾಧ್ಯವಾಗಲಿಲ್ಲ. ನಿಲ್ದಾಣಗಳಿಂದ ಹೊರ ಬರುವುದಕ್ಕೂ ಸಾಧ್ಯವಾಗಲಿಲ್ಲ. ಬಳಿಕ ನಿಲ್ದಾಣದ ಸಿಬ್ಬಂದಿ ಪ್ರಯಾಣಿಕರ ಟಿಕೆಟ್ ಅಥವಾ ಮೆಟ್ರೊ ಪ್ರಯಾಣ ಕಾರ್ಡ್ ವಿವರ ಪಡೆದು ಅವರು ಹೊರಹೋಗಲು ಅನುವು ಮಾಡಿಕೊಟ್ಟರು.
10.45ರ ನಂತರ ಸಂಚರಿಸುವ ಕೆಲ ರೈಲುಗಳು 15 ನಿಮಿಷ ತಡವಾಗಿ ಸಂಚರಿಸಿದವು. ಇದರಿಂದಾಗಿ ಮೈಟ್ರೊ ರೈಲಿನಲ್ಲಿ ಹೋಗಿ ಬೇರೆ ಬಸ್ ಮತ್ತು ರೈಲುಗಳನ್ನು ಹಿಡಿದು ಪರ ಊರುಗಳಿಗೆ ಪ್ರಯಾಣಿಸುವವರು ಸಮಸ್ಯೆ ಎದುರಿಸಿದರು.
ತಡ ರಾತ್ರಿ ಈ ಸಮಸ್ಯೆ ದಿಡೀರ್ ಕಾಣಿಸಿಕೊಂಡಿದ್ದರಿಂದ ಪ್ರಯಾಣಿಕರ ಟಿಕೆಟ್ ಹಾಗೂ ಕಾರ್ಡ್ ವಿವರ ಪಡೆಯುವುದಕ್ಕೂ ನಿಲ್ದಾಣಗಳಲ್ಲಿ ಸಿಬ್ಬಂದಿ ಕೊರತೆ ಇತ್ತು. ‘ಮೆಟ್ರೊ ರೈಲು ನಂಬಿಕೊಂಡು ಬಸ್ ತಪ್ಪಿಸಿಕೊಳ್ಳಬೇಕಾಯಿತು. ನಮಗೆ ಬಸ್ ಟಿಜೆಟ್ ದರವನ್ನು ಹಿಂಪಾವತಿ ಮಾಡುವವರು ಯಾರು. ನಾನು ಮಂಗಳೂರಿಗೆ ಹೋಗಬೇಕಿದೆ. ಬಸ್ ಸಿಗುತ್ತದೆಯೊ ಇಲ್ಲವೋ ಗೊತ್ತಿಲ್ಲ’ ಎಂದು ಪ್ರಯಾಣಿಕ ನಾಗರಾಜ್ ‘ಪ್ರಜಾವಾಣಿ’ ಜೊತೆ ಅಳಲು ತೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.