ಬೆಂಗಳೂರು: ಜಕ್ಕೂರು ಏರೋಡ್ರೋಮ್ ಪಶ್ಚಿಮ ಭಾಗದಲ್ಲಿ ಎತ್ತರಿಸಿದ ಮೆಟ್ರೊ ರೈಲು ಮಾರ್ಗ ನಿರ್ಮಾಣ ವಿಷಯದಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ನೀಡಿರುವ ಸಲಹೆ ಆಧರಿಸಿ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಸಲಹೆ ಪಾಲನೆ ಬಗ್ಗೆ ಆರು ತಿಂಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಅರ್ಜಿ ವಿಲೇವಾರಿ ಮಾಡಿತು.
ಜಕ್ಕೂರು ಏರೋಡ್ರೋಮ್ ರನ್ವೇಯಿಂದ 60 ಮೀಟರ್ ದೂರದಲ್ಲಿ ಎತ್ತರಿಸಿದ ಮೆಟ್ರೊ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. ಯಾವುದೇ ನಿರ್ಮಾಣವನ್ನು ಈ ವಲಯದಲ್ಲಿ ಮಾಡಲು ನಿಷೇಧವಿದೆ ಎಂದು ನಗರದ ವಕೀಲ ಅಜಯ್ ಕುಮಾರ್ ಪಾಟೀಲ ಅರ್ಜಿ ಸಲ್ಲಿಸಿದ್ದರು.
ಮೆಟ್ರೊ ರೈಲು ಮಾರ್ಗದಿಂದ ಆಗಲಿರುವ ತೊಂದರೆ ಬಗ್ಗೆ ಡಿಜಿಸಿಎ ಮೇ 20ರಂದು ಬರೆದಿರುವ ಪತ್ರದಲ್ಲಿ ತಿಳಿಸಿದೆ. ತೊಂದರೆ ಆಗದಂತೆ ಕ್ರಮಗಳನ್ನು ಕೈಗೊಂಡ ಬಳಿಕ ನಿರ್ಧಾರವನ್ನು ಎನ್ಒಸಿ ಸಮಿತಿ ಮುಂದೆ ಸಲ್ಲಿಸಬೇಕು ಎಂದು ಪೀಠ ತಿಳಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.