ADVERTISEMENT

ಸಂಚಾರ ದಟ್ಟಣೆ ವಿಶ್ಲೇಷಣೆಗೆ ಮುಂದಾದ ಬಿಎಂಆರ್‌ಸಿಎಲ್‌

ಮೂರನೇ ಹಂತದ ಮೆಟ್ರೊ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 20:58 IST
Last Updated 23 ನವೆಂಬರ್ 2021, 20:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಮ್ಮ ಮೆಟ್ರೊ ಮೂರನೇ ಹಂತದ ವಿಸ್ತರಣೆ ಸಂದರ್ಭದಲ್ಲಿ ಹೆಬ್ಬಾಳದ ಕೆಂಪಾಪುರದಿಂದ ಜೆ.ಪಿ.ನಗರ 4ನೇ ಹಂತದವರೆಗೆ 32.16 ಕಿ.ಮೀ. ಹಾಗೂ ಹೊಸಹಳ್ಳಿ ನಿಲ್ದಾಣದ ಟೋಲ್‌ಗೇಟ್‌ನಿಂದ ಕಡಬಗೆರೆವರೆಗೆ 12.82 ಕಿ.ಮೀ ಉದ್ದದ ರೈಲು ಮಾರ್ಗಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ.

ಇದಕ್ಕಾಗಿ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಈ ಮಾರ್ಗಗಳಲ್ಲಿ ಸಂಚಾರ ದಟ್ಟಣೆಯ ವಿಶ್ಲೇಷಣೆ ಪುನರಾರಂಭಿಸಿದೆ.

ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ಕೋವಿಡ್‌ ಅಡ್ಡಿಯಾಗಿತ್ತು. ಈಗ ನಗರದಲ್ಲಿ ಕೋವಿಡ್‌ ಪ್ರಕರಣಗಳು ಕಡಿಮೆಯಾಗಿರುವ ಕಾರಣ ಡಿಪಿಆರ್‌ ತಯಾರಿಕಾ ಕಾರ್ಯ ಮತ್ತೆ ಚುರುಕು ಪಡೆದುಕೊಂಡಿದೆ.

ADVERTISEMENT

‘ಭೂ ತಾಂತ್ರಿಕ ಮತ್ತು ಸ್ಥಳಾಕೃತಿಯ ಸರ್ವೆ ಕಾರ್ಯಗಳು ಬಹುತೇಕ ಪೂರ್ಣಗೊಂಡಿವೆ.ಮುಂದಿನ ಎರಡು ತಿಂಗಳಲ್ಲಿ ಈ ಮಾರ್ಗಗಳಲ್ಲಿನ ಸಂಚಾರ ವಿಶ್ಲೇಷಣೆ ಕಾರ್ಯವೂ ಮುಕ್ತಾಯಗೊಳ್ಳಲಿದೆ’ ಎಂದುಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

‘ಮೆಟ್ರೊ ಮೂರನೇ ಹಂತದ ಪೂರ್ವ ಕಾರ್ಯಸಾಧ್ಯತಾ ವರದಿಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಈಗಾಗಲೇ ತಯಾರಿಸಲಾಗಿರುವಡಿಪಿಆರ್‌ ಅನ್ನೇ ಅಂತಿಮಗೊಳಿಸುವ ಸಾಧ್ಯತೆ ಇದೆ. ಅದನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಬಳಿಕ ಆ ಡಿಪಿಆರ್‌ಗೆ ಕೇಂದ್ರ ಸರ್ಕಾರದ ಅನುಮೋದನೆ ಸಿಗಬೇಕಾಗುತ್ತದೆ’ ಎಂದೂ ಹೇಳಿವೆ.

‘ಮೂರನೇ ಹಂತದಲ್ಲಿ ಹೊಸಕೆರೆಹಳ್ಳಿಯಿಂದ ಮಾರತ್ತಹಳ್ಳಿ ಹಾಗೂ ಸರ್ಜಾಪುರ ರಸ್ತೆಯಿಂದ ಯಲಹಂಕದವರೆಗೆ ಮೆಟ್ರೊ ರೈಲು ಮಾರ್ಗಗಳನ್ನು ನಿರ್ಮಿಸಲೂ ಉದ್ದೇಶಿಸಲಾಗಿತ್ತು. ಈ ಯೋಜನೆಯನ್ನು ಬಿಎಂಆರ್‌ಸಿಎಲ್‌ ಕೈಬಿಡುವ ಸಾಧ್ಯತೆ ಇದೆ’ ಎಂದೂ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.