
ಎಚ್.ಸಿ. ಮಹದೇವಪ್ಪ
ಬೆಂಗಳೂರು: ‘ದೇಶದ ಆರ್ಥಿಕ ವ್ಯವಸ್ಥೆ ಸಮಸ್ಯೆಗೆ ಟಾನಿಕ್ನಂತಿದ್ದ ಮನರೇಗಾ ಯೋಜನೆಯ ರೆಕ್ಕೆ ಪುಕ್ಕಗಳನ್ನು ಕತ್ತರಿಸಿ, ಗ್ರಾಮ ಪಂಚಾಯಿತಿಗಳಿಗಿದ್ದ ಸ್ವಾತಂತ್ರ್ಯವನ್ನು ಕಿತ್ತು ಹಾಕಿರುವ ಕೇಂದ್ರ ಸರ್ಕಾರವು ಈ ಯೋಜನೆಯ ಹೆಸರ ಬದಲಾಯಿಸಿ ‘ರಾಮನ ಯೋಜನೆ’ ಎಂದು ಮಾಡಿದೆ. ರಾಮನ ಹೆಸರಲ್ಲಿ ರಾಜ್ಯಗಳ ಕತ್ತು ಹಿಸುಕುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ದೂರಿದ್ದಾರೆ.
ನರೇಗಾ ಯೋಜನೆಯಡಿ ಸಂಪೂರ್ಣ ಕೂಲಿ ಪಾವತಿಯ ಜವಾಬ್ದಾರಿ ಇಲ್ಲಿವರೆಗೆ ಕೇಂದ್ರ ಸರ್ಕಾರದ್ದಾಗಿತ್ತು. ರಾಜ್ಯ ಸರ್ಕಾರವು ಸಾಮಗ್ರಿಗಳ ಒಟ್ಟು ವೆಚ್ಚದಲ್ಲಿ ಶೇ 25ರಷ್ಟು ಮಾತ್ರವೇ ಭರಿಸುತ್ತಿತ್ತು. ಆದರೆ ಈಗ ಕೇಂದ್ರ ಸರ್ಕಾರವು ಈಗ ರಾಜ್ಯಗಳ ಮೇಲೆ ಹೊರೆ ಹೊರಸಲು ಮುಂದಾಗಿದೆ. ಕರ್ನಾಟಕದಂತಹ ರಾಜ್ಯಗಳಿಗೆ ಶೇ 60ರಷ್ಟು ಮಾತ್ರ ನೀಡುತ್ತೇವೆ. ಉಳಿದ ಶೇ 40ರಷ್ಟು ಹಣವನ್ನು ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಬಾಂಬ್ ಹಾಕಿದೆ ಎಂದು ಟೀಕಿಸಿದರು.
ಗ್ರಾಮಗಳ ಸ್ವಾವಲಂಬನೆಯ ಮಾರ್ಗವನ್ನು ಅನುಸರಿಸಲು ಹಿಂದೆ ಯುಪಿಎ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿತ್ತು. ಗ್ರಾಮಸ್ವರಾಜ್ಯದ ಕನಸು ಕಂಡಿದ್ದ ಮಹಾತ್ಮ ಗಾಂಧಿಯವರ ಹೆಸರನ್ನು ಈ ಉದ್ಯೋಗ ಖಾತರಿ ಯೋಜನೆಗೆ ಇಟ್ಟಿತ್ತು. ಈಗ ಹೆಸರನ್ನೂ ಬದಲಾಯಿಸಿ, ಸ್ಥಳೀಯಾಡಳಿತಗಳ ಸ್ವಾತಂತ್ರ್ಯವನ್ನೂ ಕಿತ್ತುಕೊಂಡು ಜನವಿರೋಧಿ ಕಾರ್ಯಕ್ರಮವನ್ನಾಗಿ ಮಾಡಿದೆ ಎಂದು ದೂರಿದರು.
ಯೋಜನೆಯ ಹೆಸರನ್ನು ಬದಲಾಯಿಸಬಾರದು. ಮಾತ್ರವಲ್ಲ, ಯೋಜನೆಯ ಮೂಲ ಸ್ವರೂಪವನ್ನೂ ಬದಲಾಯಿಸಬಾರದು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.