ಬೆಂಗಳೂರು: ಬಾಷ್ ಸಂಸ್ಥೆಯ ಮೈಕೊ ಕನ್ನಡ ಬಳಗ–2022ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಬಿಡದಿಯಲ್ಲಿ ನ.17ರಂದು ಮಧ್ಯಾಹ್ನ 1ಕ್ಕೆ ನಡೆಯುವ ಕನ್ನಡ ರಾಜ್ಯೋತ್ಸವದಲ್ಲಿ ಪ್ರದಾನ ಮಾಡಲಾಗುತ್ತಿದೆ.
ದೂರದರ್ಶನದ ಹಿರಿಯ ಕಾರ್ಯಕ್ರಮ ನಿರೂಪಕಿ ಎಚ್.ಎನ್.ಆರತಿ ಅವರಿಗೆ ‘ರಾಷ್ಟ್ರಕವಿ ಕುವೆಂಪು’ ಸಂಶೋಧಕಿ ಎಚ್.ಶಶಿಕಲಾ ಅವರಿಗೆ ‘ರೆ.ಫ. ಕಿಟ್ಟಲ್’ ಹಾಗೂ ಸಾಲುಮರದ ನಿಂಗಣ್ಣ ಅವರಿಗೆ ‘ಲಕ್ಷ್ಮೀಧರ ಅಮಾತ್ಯ’ ನೆನಪಿನ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಗಳು ತಲಾ ₹ 10 ಸಾವಿರ ನಗದು ಪುರಸ್ಕಾರ ಒಳಗೊಂಡಿವೆ.
17ರಂದು ನಡೆಯುವ ಕಾರ್ಯಕ್ರಮವನ್ನು ಮೈಸೂರು ರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸುವರು, ಮೈಕೊ ಕನ್ನಡ ಬಳಗದ ಗೌರವಾಧ್ಯಕ್ಷೆ ಡಾ.ಪದ್ಮಿನಿ ನಾಗರಾಜು ಅಧ್ಯಕ್ಷತೆ ವಹಿಸುವರು. ವಾಣಿಜ್ಯ ಅಧಿಕಾರಿ ಎಚ್.ಜಿ.ತೋಂಟೇಶ್ ಧ್ವಜಾರೋಹಣ ನೆರವೇರಿಸುವರು. ಬಾಷ್ ಕಂಪನಿ ಪ್ರಧಾನ ವ್ಯವಸ್ಥಾಪಕ ಎಂ.ಗೋಪಾಲಕರಷ್ಣ ಜೋಷಿ, ನೌಕರರ ಸಂಘದ ಸಂಸ್ಥಾಪಕ ಉಪಧ್ಯಕ್ಷ ಬಿ.ಆರ್.ಸೋಮಶೇಖರ ರೆಡ್ಡಿ ಪ್ರಶಸ್ತಿ ಪ್ರದಾನ ಮಾಡುವರು.
ಮೈಕೊ ಕನ್ನಡ ಬಳಗದ ಅಧ್ಯಕ್ಷ ಎಸ್.ಮಂಜುನಾಥ್, ಸಂಸ್ಥೆಯ ಪ್ರಮುಖರಾದ ಪಿ.ಸುಭಾಷಿಣಿ, ಗಂಗಣ್ಣ ಉಪಸ್ಥಿತರಿರುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.