ಬೆಂಗಳೂರು: ಕೂಲಿ ವಿಚಾರವಾಗಿ ಕಾರ್ಮಿಕರಿಬ್ಬರ ನಡುವೆ ನಡೆದ ಜಗಳದಲ್ಲಿ ಅಂಥೋಣಿ ರಾಜ್ (42) ಎಂಬುವರು ಕೊಲೆಯಾಗಿದ್ದಾರೆ. ಆರೋಪಿ ರಾಜು ಎಂಬಾತನನ್ನು ಮೈಕೊ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ನಗರದ ಮೈಲಸಂದ್ರ ನಿವಾಸಿಯಾಗಿರುವ ಅಂಥೋಣಿ, ಕಟ್ಟಡಗಳ ಅವಶೇಷಗಳನ್ನು ಟಿಪ್ಪರ್ ಲಾರಿಗೆ ತುಂಬುವ ಕೆಲಸ ಮಾಡಿಕೊಂಡಿದ್ದರು. ತಮಿಳುನಾಡು ಮೂಲದ ರಾಜು ಕೂಡ ಇದೇ ಕೆಲಸ ಮಾಡುತ್ತಿದ್ದ. ಇವರಿಬ್ಬರೂ ಬಿಳೇಕಹಳ್ಳಿ ಬಳಿ ಇದ್ದ ಶೆಡ್ವೊಂದರಲ್ಲಿ ಇರುತ್ತಿದ್ದರು. ಇದೇ 9ರಂದು ಕೂಲಿ ವಿಚಾರವಾಗಿ ಅಂಥೋಣಿಯು ಆರೋಪಿ ಜೊತೆ ಜಗಳವಾಡಿದ್ದರು. ಗುರುವಾರ ಸಂಜೆಯೂ ಪರಸ್ಪರರ ನಡುವೆ ಗಲಾಟೆ ನಡೆದಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಗುರುವಾರ ರಾತ್ರಿ ಜೊತೆಯಾಗಿಯೇ ಶೆಡ್ಗೆ ಹೋಗಿದ್ದ ಇಬ್ಬರು ಅಲ್ಲೇ ಮಲಗಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದಿತ್ತು. ಸಿಟ್ಟಾದ ಅಂಥೋಣಿ, ಕಬ್ಬಿಣದ ಕುರ್ಚಿಯಿಂದ ಆರೋಪಿ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಈ ವೇಳೆ ಆರೋಪಿಯು ಅಲ್ಲೇ ಇದ್ದ ದೊಣ್ಣೆಯಿಂದ ಅಂಥೋಣಿ ತಲೆಗೆ ಬಲವಾಗಿ ಹೊಡೆದಿದ್ದಾನೆ. ಸ್ಥಳದಲ್ಲೇ ಕುಸಿದಿದ್ದ ಅವರು ತೀವ್ರ ರಕ್ತಸ್ರಾವದಿಂದ ಮೃತರಾಗಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.