ಬೆಂಗಳೂರು: ಲಾಕ್ಡೌನ್ ಕಾರಣ ದಿಂದಾಗಿ ಸ್ವಂತ ಊರಿಗೆ ತೆರಳಿದ್ದ ವಲಸೆ ಕಾರ್ಮಿಕರು, ನಗರಕ್ಕೆ ಮರಳುವುದ
ರೊಳಗೆ ಅವರ ಮನೆಗಳಿಗೆ ಬೀಗ ಹಾಕಲಾಗಿದೆ.
‘ಬಿಬಿಎಂಪಿ ವಾರ್ಡ್ ಸಂಖ್ಯೆ 38ರ ಆಶ್ರಯ ನಗರದಲ್ಲಿ ನಾವು ವಾಸವಾಗಿದ್ದೇವೆ. ಲಾಕ್ಡೌನ್ ಇದ್ದಾಗ ಊರಿಗೆ ತೆರಳಿದ್ದೆವು. ವಾಪಸ್ ಬರುವುದರೊಳಗೆ ಪಾಲಿಕೆ ಸದಸ್ಯೆ ಆಶಾ ಸುರೇಶ್ ಕಡೆಯವರು ಮನೆಗಳಿಗೆ ಬೀಗ ಹಾಕಿದ್ದಾರೆ. ಐದಾರು ಮನೆಗಳಿಗೆ ಹಾನಿ ಮಾಡಿದ್ದಾರೆ. ನೂರಾರು ಜನ ಬೀದಿಗೆ ಬಿದ್ದಿದ್ದೇವೆ’ ಎಂದು ನಾಗರತ್ನ ಅವರು ಅಳಲು ತೋಡಿಕೊಂಡರು.
ಇಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರು ನೆಲೆಸಿದ್ದಾರೆ. ಕಲಬುರ್ಗಿ, ರಾಯಚೂರು, ಬೀದರ್, ತುಮಕೂರು ಸೇರಿ
ದಂತೆ ವಿವಿಧ ಜಿಲ್ಲೆಯವರಾದ ಇವರಲ್ಲಿ ಬಹುತೇಕರು ಕೂಲಿ ಕಾರ್ಮಿಕರು.
‘ಈ ವಾರ್ಡ್ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ.2006ರಲ್ಲಿ ಬಿಬಿಎಂಪಿಯವರು ಇಲ್ಲಿಮನೆಗಳನ್ನು ಧ್ವಂಸಗೊಳಿಸಿದ್ದರು.ಆದರೆ, ನಾವು ಹೋರಾಟ ಮಾಡಿದ್ದರಿಂದ ಮತ್ತೆ ಆಶ್ರಯ ನೀಡಲಾಯಿತು. ಈ ಪ್ರದೇಶವನ್ನು ಕೊಳೆಗೇರಿ ಎಂದು ಘೋಷಿಸಲಾಗಿದ್ದು, ಸಂಬಂಧಿಸಿದ ಅಧಿಕೃತ ದಾಖಲೆಗಳು ಶೀಘ್ರದಲ್ಲಿ ಕೈ ಸೇರಲಿವೆ. ಎರಡು ಸಾವಿರ ಜನರಿದ್ದಾರೆ. ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಎಲ್ಲವನ್ನೂ ನೀಡಿದ್ದಾರೆ. ಆದರೂ, ಆಶಾ ಸುರೇಶ್ ಬೆಂಬಲಿಗರು ಈ ಜಾಗದ ಮೇಲೆ ಕಣ್ಣಿಟ್ಟಿದ್ದಾರೆ’ ಎಂದು ಬಿಎಸ್ಪಿ ರಾಜ್ಯ ಘಟಕದ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ದೂರಿದರು.
‘29 ಮನೆಗಳಿಗೆ ಬೀಗ ಹಾಕಿದ್ದು, ಕೆಲ ಮನೆಗಳಿಗೆ ಬೇರೆಯವರನ್ನು ತಂದು ಬಿಟ್ಟಿದ್ದಾರೆ. ಈ ಬಗ್ಗೆ ವಸತಿ ಸಚಿವ ಸೋಮಣ್ಣ ಅವರಿಗೆ ದೂರು ನೀಡಿದ್ದೇವೆ. ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರಿಗೆ ವರದಿ ನೀಡಲು ಅವರು ಸೂಚಿಸಿದ್ದಾರೆ’ ಎಂದರು.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಆಶಾ ಸುರೇಶ್ ಕರೆ ಮಾಡಿದರೂ, ಅವರು ಕರೆ ಸ್ವೀಕರಿಸಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.