ಬೆಂಗಳೂರು: ‘ಕೋವಿಡ್ ಸಂದರ್ಭದಲ್ಲಿ ಸಕಾರಾತ್ಮಕ (ಪಾಸಿಟಿವ್) ಎಂಬ ಪದವು ನಕಾರಾತ್ಮಕ (ನೆಗೆಟಿವ್) ಅರ್ಥವನ್ನು ನೀಡುತ್ತಿದೆ. ಈ ಅವಧಿಯಲ್ಲಿ ಕಥೆ, ಕವನಗಳು ಮನಸ್ಸಿಗೆ ಮುದ ನೀಡುತ್ತಿವೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಮನಾ ಅವರ ‘ಇಕೋಸ್ ಆಫ್ ಸೋಲ್ಫುಲ್ ಪೋಯಮ್ಸ್’ ಮತ್ತು ಲತಾ ಟಿ.ಎಸ್. ಅವರು ಅನುವಾದಿಸಿರುವ ‘ಅಂತರಂಗದ ತರಂಗ’ ಕೃತಿಗಳನ್ನು ಬಿಡುಗಡೆ ಮಾಡಿದರು.
‘7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಅವಧಿಯಲ್ಲಿ ಹಿರಿಯ ಸಾಹಿತಿಗಳು ಬರೆದ ಕವಿತೆಗಳನ್ನು ಓದಲು ನಾವು ಕಷ್ಟಪಡುತ್ತಿದ್ದೆವು. ಆದರೆ, 7ನೇ ತರಗತಿಯ ವಿದ್ಯಾರ್ಥಿನಿ ಅಮನಾ ಸಕಾರಾತ್ಮಕ ಭಾವನೆ ಮೂಡಿಸುವ ಕವಿತೆಗಳನ್ನು ರಚಿಸಿದ್ದಾಳೆ. ಸಮಾಜದ ಕುರಿತ ಕಳಕಳಿ, ಕಾಳಜಿ, ಅಂತಃಕರಣ, ಉದಾರತೆ ಎಲ್ಲವುಗಳನ್ನೂ ಅವಳ ಕವಿತೆಗಳಲ್ಲಿ ಕಾಣಬಹುದು’ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಜೋಗಿ. ‘ಸಣ್ಣ ಮಕ್ಕಳು ಮಾತನಾಡಿದಾಗ ಅರ್ಥವಾಗದೇ ಇದ್ದಲ್ಲಿ ತಾಯಿ ಅದನ್ನು ಅನುವಾದ ಮಾಡುತ್ತಾಳೆ. ಅದೇ ರೀತಿ, ಮಗಳು ಆಂಗ್ಲ ಭಾಷೆಯಲ್ಲಿ ಬರೆದಿರುವ ಮೊದಲ ಕೃತಿಯನ್ನು ತಾಯಿ ಲತಾ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.