ADVERTISEMENT

ಮಿಟ್ಟಗಾನಹಳ್ಳಿ ಕ್ವಾರಿಯಲ್ಲಿ ಬಿಬಿಎಂಪಿ ಕಸ ವಿಲೇವಾರಿ– ಕೆಎಸ್‌ಪಿಸಿಬಿ ಅಸ್ತು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 20:46 IST
Last Updated 7 ಮಾರ್ಚ್ 2022, 20:46 IST
   

ಬೆಂಗಳೂರು: ಬೆಂಗಳೂರು ಪೂರ್ವ ತಾಲ್ಲೂಕಿನ ಮಿಟ್ಟಗಾನಹಳ್ಳಿಯ ಕ್ವಾರಿ ಹೊಂಡದಲ್ಲಿ ಕಸ ಸಂಸ್ಕರಣೆ, ಮರುಬಳಕೆ, ಶುದ್ಧೀಕರಣ ಅಥವಾ ವಿಲೇವಾರಿ ಘಟಕ ಸ್ಥಾಪಿಸಿ ನಿರ್ವಹಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಶುಕ್ರವಾರ (ಮಾರ್ಚ್‌ 4) ಅನುಮತಿ ನೀಡಿದೆ.

ಮಿಟ್ಟಗಾನಹಳ್ಳಿಯ ಸರ್ವೇ ನಂಬರ್‌ 2ರಲ್ಲಿರುವ ಕ್ವಾರಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಅನುಮತಿ ನೀಡುವಂತೆ ಕೋರಿ ಬಿಬಿಎಂಪಿಯುಕೆಎಸ್‌ಪಿಸಿಬಿಗೆ 2020ರ ಮಾರ್ಚ್‌ 5ರಂದು ಅರ್ಜಿ ಸಲ್ಲಿಸಿತ್ತು. ಈ ಕ್ವಾರಿಯಲ್ಲಿ ಕಸ ವಿಲೇವಾರಿ ಮಾಡಲು ಮಂಡಳಿಯು ಅನುಮತಿ ನೀಡಿದೆ.

ಮಿಟ್ಟಗಾನಹಳ್ಳಿ ಕ್ವಾರಿಯಲ್ಲಿ ಬಿಬಿಎಂಪಿಯು 2023 ರ ಜೂನ್‌ 30ರವರೆಗೆ ತಿಂಗಳಲ್ಲಿ 18 ಸಾವಿರ ಟನ್‌ ಕಸವನ್ನು ಇಲ್ಲಿ ವಿಲೇವಾರಿ ಮಾಡಬಹುದು.2016ರ ಕಸ ವಿಲೇವಾರಿ ನಿಯಮಗಳನ್ನು ಉಲ್ಲಂಘಿಸಿ ಕಸ ವಿಲೇವಾರಿ ಮಾಡದಿದ್ದಲ್ಲಿ, 1986 ಪರಿಸರ ಸಂರಕ್ಷಣೆ ಕಾಯ್ದೆ ಅನ್ವಯ ದಂಡ ವಿಧಿಸಲಾಗುತ್ತದೆ ಎಂದು ಅನುಮತಿ ಪತ್ರದಲ್ಲಿ ತಿಳಿಸಲಾಗಿದೆ.

ADVERTISEMENT

ಬಿಬಿಎಂಪಿಯಿಂದ ಅರ್ಜಿ ಸಲ್ಲಿಕೆಯಾದ ಎರಡು ವರ್ಷಗಳ ಬಳಿಕ ಅನುಮತಿ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ವಿಳಂಬವನ್ನು ಸಮರ್ಥಿಸಿಕೊಂಡ ಕೆಎಸ್‌ಪಿಸಿಬಿ ಅಧಿಕಾರಿಯೊಬ್ಬರು, ‘ಯಾವುದೇ ಒತ್ತಡಕ್ಕೆ ಬಿದ್ದು ನಾವು ಈ ಕ್ರಮ ಕೈಗೊಂಡಿಲ್ಲ. ಸ್ಥಳ ಪರಿಶೀಲನೆ, ಪರಿಸರ ಇಲಾಖೆ ಅನುಮತಿ, ಕೆಎಸ್‌ಪಿಸಿಬಿ ಆಡಳಿತ ಮಂಡಳಿಯ ಅನುಮೋದನೆ ಬಳಿಕವೇ ನಾವು ಬಿಬಿಎಂಪಿಗೆ ಅನುಮತಿ ನೀಡಬೇಕಾಗುತ್ತದೆ’ ಎಂದರು.

ಬಿಬಿಎಂಪಿಯು ಮಿಟ್ಟಗಾನಹಳ್ಳಿ ಕ್ವಾರಿಯಲ್ಲಿ ನಿತ್ಯ 1 ಸಾವಿರ ಟನ್‌ಗಳಷ್ಟು ಮಿಶ್ರ ಕಸವನ್ನು ವಿಲೇ ಮಾಡುತ್ತಿದೆ. ಕೆಲವು ಕಸ ಸಂಸ್ಕರಣೆ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡದ ಕಾರಣಬಿಬಿಎಂಪಿಯು ಈ ಕ್ವಾರಿಯನ್ನು ಹೆಚ್ಚು ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿತ್ತು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಲ್ಲಿ ಬಿಬಿಎಂಪಿ ವಿಫಲವಾಗಿದೆ’ ಎಂದು ಆಕ್ಷೇಪಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠವು ಶನಿವಾರ (ಮಾರ್ಚ್ 5) ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

***

ತಿಂಗಳಲ್ಲಿ 18 ಸಾವಿರ ಟನ್‌ ಕಸವನ್ನು ಇಲ್ಲಿ ವಿಲೇವಾರಿ ಮಾಡಬಹುದು

ಕಸ ವಿಲೇವಾರಿ ಮಾಡದಿದ್ದಲ್ಲಿ 1986 ಪರಿಸರ ಸಂರಕ್ಷಣೆ ಕಾಯ್ದೆ ಅನ್ವಯ ಬಿಬಿಎಂಪಿ ದಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.