ADVERTISEMENT

ಶಾಸಕ ಅರವಿಂದ ಬೆಲ್ಲದ ಹೇಳಿಕೆ ಸಂಗ್ರಹ: ಅರ್ಚಕರೊಬ್ಬರಿಗೆ ನೋಟಿಸ್

ಕರೆ ಕದ್ದಾಲಿಕೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 16:36 IST
Last Updated 1 ಜುಲೈ 2021, 16:36 IST

ಬೆಂಗಳೂರು: ದೂರವಾಣಿ ಕರೆ ಕದ್ದಾಲಿಕೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಶೇಷಾದ್ರಿಪುರ ಉಪವಿಭಾಗದ ಎಸಿಪಿ ನೇತೃತ್ವದ ತಂಡ, ಬಿಜೆ‍ಪಿ ಶಾಸಕ ಅರವಿಂದ ಬೆಲ್ಲದ ಅವರಿಂದ ಎರಡನೇ ಬಾರಿ ಹೇಳಿಕೆ ಪಡೆದಿದೆ. ಜೊತೆಗೆ, ಹೈದರಾಬಾದ್‌ನಲ್ಲಿರುವ ಅರ್ಚಕರೊಬ್ಬರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದೆ.

‘ನನ್ನ ಕರೆಯನ್ನು ಯಾರೋ ಕದ್ದಾಲಿಕೆ ಮಾಡುತ್ತಿದ್ದಾರೆ. ಜೈಲಿನಿಂದ ಯುವರಾಜ್ ಎಂಬಾತ ಸಹ ಕರೆ ಮಾಡಿದ್ದ’ ಎಂದು ಆರೋಪಿಸಿ ಶಾಸಕ ಬೆಲ್ಲದ ಇತ್ತೀಚೆಗಷ್ಟೇ ಗೃಹ ಸಚಿವರ ಮೂಲಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದರು.

ದೂರಿನ ವಿಚಾರಣೆ ಜವಾಬ್ದಾರಿಯನ್ನು ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಯತಿರಾಜ್ ಅವರಿಗೆ ವಹಿಸಲಾಗಿತ್ತು. ವಿಚಾರಣೆ ನಡೆಯುತ್ತಿರುವಾಗಲೇ ಯತಿರಾಜ್ ಅವರನ್ನು ಏಕಾಏಕಿ ಬದಲಾವಣೆ ಮಾಡಿ, ತನಿಖೆ ಹೊಣೆಯನ್ನು ಶೇಷಾದ್ರಿಪುರ ಉಪವಿಭಾಗದ ಎಸಿಪಿ ಪೃಥ್ವಿ ಅವರಿಗೆ ವಹಿಸಲಾಗಿದೆ.

ADVERTISEMENT

ವಿಚಾರಣೆ ಚುರುಕುಗೊಳಿಸಿರುವ ಎಸಿಪಿ ಪೃಥ್ವಿ, ‘ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿಯ ಅಗತ್ಯವಿದೆ. ಹೀಗಾಗಿ, ಹೇಳಿಕೆ ನೀಡಲು ಕಚೇರಿಗೆ ಬನ್ನಿ’ ಎಂದು ಬೆಲ್ಲದ ಅವರಿಗೆ ಪತ್ರ ಕಳುಹಿಸಿದ್ದರು. ಅದರನ್ವಯ ಶಾಸಕ ಬೆಲ್ಲದ, ಬುಧವಾರ ಎಸಿಪಿ ಎದುರು ಹಾಜರಾದರು.

‘ಜೈಲಿನಿಂದ ಯಾವೆಲ್ಲ ಸಂಖ್ಯೆಯಿಂದ ಕರೆಗಳು ಬಂದಿದ್ದವು. ಕರೆ ಕದ್ದಾಲಿಕೆ ಬಗ್ಗೆ ಯಾವೆಲ್ಲ ಪುರಾವೆಗಳು ಇವೆ ಎಂಬುದರ ಬಗ್ಗೆ ಬೆಲ್ಲದ ಅವರಿಂದ ಮಾಹಿತಿ ಪಡೆಯಲಾಗಿದೆ. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಹೈದರಾಬಾದ್ ಅರ್ಚಕರಿಗೆ ಬುಲಾವು: ‘ಬೆಲ್ಲದ ಅವರು ನೀಡಿರುವ ಮೊಬೈಲ್ ಸಂಖ್ಯೆ, ಹೈದರಾಬಾದ್‌ನಲ್ಲಿರುವ ಅರ್ಚಕರೊಬ್ಬರ ಹೆಸರಿನಲ್ಲಿದೆ. ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಅರ್ಚಕರೇ ಕರೆ ಮಾಡಿದ್ದರಾ? ಅಥವಾ ಅವರ ಸಂಖ್ಯೆಯಿಂದ ಬೇರೆ ಯಾರಾದರೂ ಕರೆ ಮಾಡಿದ್ದರಾ? ಎಂಬುದು ವಿಚಾರಣೆ ಬಳಿಕವೇ ತಿಳಿಯಬೇಕಿದೆ’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.